ಕಾಡಿದ್ರೂ ಬೇಡಿದ್ರೂ ಅದು ವ್ಯಾಪಾರ :(

ಚಿತ್ರಕೃಪೆ - www.indiamike.com
ಚಿತ್ರಕೃಪೆ – www.indiamike.com

ಆಕ್ಸಿಡೆಂಟ್ ಆದಾಗ ನೆಪಾದಳು ಆ ಚೆಲುವೆ ಎಂದು ಹೇಳಿದ್ರೂ ವಿಶ್ರಾಂತಿಗಾಗಿ ಮನೆಗೆ ಅಂದ್ರೆ ಚಿತ್ರದುರ್ಗಕ್ಕೆ ತೆರಳುವಾಗ ಬಸ್‌ನಲ್ಲಿ ಕಾಡಿದಾತ ವ್ಯಾಪಾರಿ. ಅಷ್ಟಾದ್ರೆ ಪರವಾಗಿರಲಿಲ್ಲ. ವಾಪಸ್ ಬರೋವಾಗ್ಲೂ  ಬಸ್‌ನಲ್ಲಿ ಕಾಡಿದ್ದೂ ವ್ಯಾಪಾರಿಯೇ. ಒಬ್ಬ ಕಾಡಿದ ರೀತಿಗೆ ಮೆಚ್ಚುಗೆಯಾದ್ರೆ… ಇನ್ನೊಬ್ಬ ಕಾಡಿದ ರೀತಿಗೆ ಎದ್ದು ಹೋಗಿ ಒದ್ದೇ ಬಿಡೋಣ ಅನ್ನೋ ಮನಸ್ಸಾಯ್ತು ಅಷ್ಟೇ ವ್ಯತ್ಯಾಸ.. :)

 
                                                      ****
 
ಬೆಂಗಳೂರಿನಿಂದ ಚಿತ್ರದುರ್ಗ ಹೋಗುವ ಬಸ್‌ ಏರಿದ್ದೆ. ಮಧ್ಯಭಾಗದಲ್ಲಿ ಸೀಟೂ ಸಿಕ್ಕಿತ್ತು. ಇನ್ನೇನು ಬಸ್ ಹೊರಡಬೇಕು ಅನ್ನೋ ಹೊತ್ತಲ್ಲಿ ಒಂದಿಬ್ಬರು ಯುವಕರು ಬಸ್‌ ಹತ್ತಿದ್ದರು. ಕೈಯಲ್ಲೊಂದಿಷ್ಟು ಲಗೇಜ್ ಕೂಡಾ ಇದ್ದವು. ನೋಡಿದ್ರೆ ಗೊತ್ತಾಗ್ತಿತ್ತು. ಬಟ್ಟೆ ವ್ಯಾಪಾರಿಗಳು ಅಂತ. ನನ್ನ ಪಕ್ಕದ ಸೀಟಲ್ಲೇ ಅಜ್ಜ ಅಜ್ಜಿ  ಕೂತಿದ್ದರು. ಅವರ ಫ್ಯಾಮಿಲಿ ಸದಸ್ಯರು ನನ್ನ ಹಿಂದಿನ ಸೀಟಲ್ಲಿ ಕೂತಿದ್ರು. ಕಂಡಕ್ಟರಮ್ಮ ರೈಟ್ ರೈಟ್‌ ಅನ್ನುತ್ತಲೇ ಬಸ್‌ ಹೊರಟಿತು. ಇನ್ನೇನು ಮೆಜೆಸ್ಟಿಕ್‌ ಬಸ್‌ ನಿಲ್ದಾಣ ದಾಟ್ಟಿದ್ದೇ ತಡ. ಆ ಯುವಕರಲ್ಲೊಬ್ಬ ಮುಂದೆ ಬಂದ.
 
ಎಲ್ಲರ ಎದುರು ನಿಂತು ವ್ಯಾಪಾರ ಪ್ರವರ ಶುರುಹಚ್ಚಿದ. ಕಂಪೆನಿ ಬಟ್ಟೆಗಳನ್ನು ಮಾರಾಟ ಮಾಡೋಕೆ ಬಂದಿದ್ದೇವೆ. ಎಷ್ಟು ರೇಟ್ ಬೇಕಾದ್ರೂ ಕೂಗಬಹುದು. ೧೦ ರೂಪಾಯಿಂದ್ಲೇ ಶುರುಮಾಡಿ. ಹರಾಜಲ್ಲಿ ಭಾಗವಹಿಸಿ… ರೇಟ್ ಕೂಗಿದವರಿಗೆ ಉಚಿತ ಗಿಫ್ಟ್‌ ಕೊಡ್ತೇವೆ.ರೇಟ್ ಕೂಗಿ ಟೈಂಪಾಸ್ ಮಾಡಿ.. ಅದೂ ಇದೂ ಅಂತ ಒಂದೊಂದೆ ಬಟ್ಟೆ ತಂದು ಪ್ರಯಾಣಿಕರ ಮುಂದಿಟ್ಟ…
 
ಒಬ್ಬೊಬ್ಬರೇ ಬಟ್ಟೆಯ ರೇಟ್‌ ಕೂಗಿ ಕೂಗಿ ಹೇಳಿದ್ರು. ಕೂಡಲೇ ಆತ ಮೊದಲೇ ಘೋಷಿಸಿದಂತೆ ಉಚಿತ ಗಿಫ್ಟ್‌ ನೀಡಲು ಮುಂದಾದ. ಪ್ಯಾಕೆಟ್‌ ಸ್ಕ್ರಿಪ್ಲಿಂಗ್ ಪ್ಯಾಡ್ ಕೊಡ್ತಾ ಬಂದ. ನನ್ನ ಪಕ್ಕದಲ್ಲೇ ಕೂತಿದ್ದ ಅಜ್ಜ ಅಜ್ಜಿಯ ಆ ಕಡೆ ಕೂತ ಪುಣ್ಯಾತ್ಮಿನಿಗೆ  ಆ ಚಿಕ್ಕ ಪುಸ್ತಕ ಕೊಟ್ಟ. ಒಂದೆರಡು ಬಟ್ಟೆ ಮಾರಾಟವೂ ಆಯ್ತು. ಹಾಗೆ ಆತ ಬೆಡ್‌ಶೀಟ್ ಒಂದನ್ನು ಎತ್ತಿ ತಂದು ಎಲ್ಲ ಮುಂದೆ ಹರವಿದೆ. ಅಷ್ಟರಲ್ಲಾಗಲೇ ಫ್ರೀ ಗಿಫ್ಟ್‌ ಕೊಡ್ತಾ ಇದ್ದುದ್ದನ್ನು ನೋಡಿದ ನನ್ನ ಪಕ್ಕದಲ್ಲೇ ಕೂತಿದ್ದ ಅಜ್ಜಿಗೆ ಎಲ್ಲಿಂದ ಬಂತೋ ಹುಮ್ಮಸ್ಸು ಗೊತ್ತಿಲ್ಲ… ಮೊದಲ ರೇಟ್ ಅವರೇ ಕೂಗಿದ್ರು.  ೫೦ ರೂಪಾಯಿ… ಇನ್ನಾರೋ ೫೫ ಅಂದ್ರು.. ಮತ್ತಾರೋ ನೂರು ಅಂದ್ರು.. ಹಾಗೆ ಅದನು ೨೫೦ಕ್ಕೆ ನಿಂತು ಹೋಯ್ತು.
ಮಾರಾಟ ಮಾಡ್ತಾ ಇದ್ದ ಯುವಕ ಹೇಳಿದ… ಇದು ಕಂಪೆನಿ ಮಾಲು. ಹತ್ತಲ್ಲ ನೂರಲ್ಲ ೨೦೦ ಅಲ್ಲ ೨೫೦ ಕೊಟ್ರೂ ಸಿಗಲ್ಲ… ಇದನ್ನು ಯಾರಿಗೂ ಕೊಡಲ್ಲ.. ರೇಟ್ ಕೂಗಿದವರಿಗೆ ಫೋಟೋ ಆಲ್ಬಮ್‌ ಗಿಫ್ಟ್‌ ಕೊಡ್ತಾ ಬಂದ. ಅಜ್ಜಿ ಕೂಗಿ ಹೇಳಿದ್ರು.. ನಂಗಿಲ್ವಾ ಗಿಫ್ಟ್‌ ಅಂತ…
 
ಬಂದೆ ಇರಿ.. ಅಂತ ಗಿಫ್ಟ್‌ ಕೊಡೋಕೆ ಹತ್ತಿರ ಬಂದಾಗ ಅಜ್ಜ ಕೇಳಿಯೇ ಬಿಟ್ರು… ಎಲ್ಲಪ್ಪಾ ನಂಗಿಲ್ವಾ ಗಿಫ್ಟ್‌ ಅದೇ ಪ್ಯಾಕೆಟ್‌ ಸ್ಕ್ರಿಪ್ಲಿಂಗ್ ಪ್ಯಾಡ್  ಕೊಡೋ ನಂಗೆ… :) ಆತ ನಗ್ತಾ ಅ‌ಜ್ಜಂಗೂ ಗಿಫ್ಟ್‌ ಕೊಟ್ಟ. ಬಳಿಕ ಒಂದು ಷರ್ಟ್‌ ಪೀಸ್ ತಗೊಂಡು ಮುಂದೆ ಬಂದ… ಗಿಫ್ಟ್‌ ಪಡ್ಕೊಂಡ ಅಜ್ಜಿಗೆ ಹುಮ್ಮಸ್ಸು ಇನ್ನಷ್ಟು ಹೆಚ್ಚಾಗಿತ್ತು. ಅದನ್ನು ನೋಡೋ ಮೊದಲೇ ೨೦೦ ರೂಪಾಯಿ ಘೋಷಿಸಿದ್ರು. ಯಾರೋ ಇನ್ನೂರ ಹತ್ತು ಅಂದ್ರು. ಅಜ್ಜಿ ಪಟ್ಟು ಬಿಡದೇ ೨೫೦ ಅಂದ್ರು.. ಅಲ್ಲಿಗೆ ನಿಂತು ಹೋಯ್ತು. ರೇಟ್‌ ಕೂಗೋದು. ಆ ಷರ್ಟ್‌‌ಪೀಸ್ ಅಜ್ಜಿ ಪಾಲಾಯ್ತು. ಅಜ್ಜಿ ತಮ್ಮ ಪರ್ಸ್‌‌ನಿಂದ ನೂರರ ಮೂರು ನೋಟು ತಗೊಂಡ್ರು. ಆತ ದುಡ್ಡು ತಗೊಂಡು ಚಿಲ್ಲರೆ ವಾಪಸ್ ಕೊಡೋಕೆ ಸ್ವಲ್ಪ ಸಮಯ ತಗೊಂಡ. ಅಜ್ಜಂಗೆ ಗಾಬರಿ ಶುರುವಾಯ್ತು. ೫೦ ರೂಪಾಯಿ ವಾಪಸ್ ಕೊಡೋ ಅಂಥ ಪ್ರಲಾಪ ತೆಗೆದರು.
 
ಅಷ್ಟರಲ್ಲೇ ಹಿಂದಿನ ಸೀಟಿನಲ್ಲಿ ಕುಳಿತ ಅಜ್ಜಿ ಸಂಬಂಧಿಕರು ಅದನ್ನು ವಾಪಸ್ ಕೊಡಿ ಅಂತ ಕೂಗಿದ್ರು. ಆದರೆ ಅಜ್ಜಿ ಮಾತ್ರ ಗಪ್‌ಚಿಪ್‌… ! ವ್ಯಾಪಾರದ ಯುವಕ ಹೇಳತೊಡಗಿದ. ನಾವು ಇಲ್ಲಿ ಬಂದಿರೋದು ವ್ಯಾಪಾರ ಮಾಡೋಕೆ. ಮೊದಲೇ ಹೇಳಿದ್ದೇವೆ. ಬಟ್ಟೆ ನೋಡಿ ರೇಟ್ ಕೂಗಿ ಅಂತ.. ಎಲ್ಲರ ಎದುರಲ್ಲೇ ರೇಟ್‌ ಕೂಗಿದ್ದೀರಾ ಅಂದ್ಮೇಲೆ ನೋಡಿ ತಾನೇ ಅದನ್ನೆಲ್ಲಾ ಮಾಡಿದ್ದು ಅಂದ… ಹಾಗೆ ಅಲ್ಲಿಗೆ ವ್ಯಾಪಾರ ಕ್ಲೋಸ್‌…  ಬಸ್‌ ತನ್ನ ಪಯಣ ಮುಂದುವರಿಸಿತ್ತು. ಹಾಗೇ ಎಲ್ಲರೂ ಅರ್ಧಗಂಟೆ ಟೈಂಪಾಸ್ ಮಾಡಿದ್ರು. ಅಜ್ಜಿ ಕೂಡಾ ಸಕತ್ತಾಗೇ ಟೈಂಪಾಸ್ ಕೊಟ್ರು.. ಪಾಪ ! ವ್ಯಾಪಾರ ಹೀಗೂ ಮಾಡಬಹುದು ಅಂತ ಗೊತ್ತಾಗಿರ್ಲೇ ಇಲ್ಲ.  ಗ್ರಾಹಕರನ್ನು ಸೆಳೆಯೋದಕ್ಕೆ ಬಣ್ಣದ ಜಾಹೀರಾತೇ ಬೇಕಾಗಿಲ್ಲ. ಒಂದಿಷ್ಟು ಬಣ್ಣದ ಮಾತಿದ್ದರೆ ಸಾಕು ಅನ್ನೋಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ… !
 
                                                                                                           *******
                                                                                          
ಹಾಗೆ ಚಿತ್ರದುರ್ಗ ಹೋಗಿ ವಿಶ್ರಾಂತಿ ಪಡೆದು ಹತ್ತು ಹದಿನೈದು ದಿನಗಳ ಬಳಿಕ ಮತ್ತೆ ಬೆಂಗಳೂರಿನ ಕಡೆಗೆ ಮುಖ ಮಾಡಿದೆ. ಈಗ ಹೇಳೋ ಕತೆಯಲ್ಲಿ ನಾನೇ ಬಲಿಪಶು.. :(
ಬೆಂಗಳೂರಿನಲ್ಲಿ ವ್ಯಾಪಾರದ ಒಂದು ಮುಖ ನೋಡಿದ್ದ ನನಗೆ ಇನ್ನೊಂದು ಮುಖ ಹೀಗೂ ಇರಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಚಿತ್ರದುರ್ಗದಿಂದ ಬೆಂಗಳೂರು ಬಸ್ ಹತ್ತಿದ್ದೆ. ಮಟ ಮಟ ಮಧ್ಯಾಹ್ನ ಸಮಯ. ಸ್ವಲ್ಪ ಹಿಂದಿನ ಸೀಟೇ ಗತಿಯಾಗಿತ್ತು ಆ ಬಸ್‌ನಲ್ಲಿ. ಹಾಗೆ ಹೋಗಿ ಕುಳಿತಿದ್ದೆ.  ಒಬ್ಬ ಬಸ್‌ ಏರಿದ. ೨೦ ರೂಪಾಯಿಗೆ ೩ ಟೂತ್ ಬ್ರಷ್‌.. ತಗೊಳಿ ಸಾರ್‍ ಅಂತ ಎಲ್ಲರೆದುರು ಹೇಳ್ತಾ ಬಂದ. ನೋಡೋಕೂ ಅಷ್ಟೇನೂ ಆಕರ್ಷಕ ವ್ಯಕ್ತಿತ್ವ ಹೊಂದಿರಲಿಲ್ಲ. ಅಯ್ಯೋ ಅನಿಸ್ತಿತ್ತು. ಹಾಗೆ  ನನ್ನ ಬಳಿಗೂ ಬಂದ. ಸರ್‍ ೨೦ ರೂಪಾಯಿ.. ಬ್ರಷ್ ತಗೊಳಿ ಸಾರ್‍… ಅಂದ. ಬೇಡ ಅಂದೆ..
 
ಆತ ಹೋಗ್ತಾನೆ ಅಂದ್ಕೊಂಡೆ. ಅದೇ ತಪ್ಪಾಯ್ತು. ಆತ ಕೂಡಲೇ ಕಾಲು ಹಿಡ್ಕೊಂಡು ಬಿಡೋದೆ… ಛೇ.. ! ಎಲ್ಲರ ನೋಟವೂ ನನ್ನ ಕಡೆಗೆ ಏನ್ ಮಾಡ್ಲಿ ? ಇಪ್ಪತ್ತು ರೂಪಾಯಿ ಕೊಟ್ಟು ಖರೀದಿ ಮಾಡೋವಷ್ಟು ಉತ್ತಮ ಗುಣಮಟ್ಟದ ಬ್ರಷ್‌ ಅದಲ್ಲ. ಕೊಡದೇ ಹೋದರೆ ಇವನೆಂಥಾ ನಿಷ್ಕರುಣಿ ಅನ್ನೋ ನೋಟಗಳನ್ನು ಎದುರಿಸಬೇಕಲ್ಲಪ್ಪಾ ಅಂತ ವಿಚಲಿತನಾದೆ. ಆದರೂ ಸಾವರಿಸಿಕೊಂಡೆ… ಆಗ ಆತನ ಮಾತು ಕಿವಿಗೆ ಅಪ್ಪಳಿಸ್ತು..
ಸರ್‍ ಊಟ ಮಾಡಿಲ್ಲ ಪ್ಲೀಸ್‌ … ೨೦ ರೂಪಾಯಿ ಕೊಟ್ಟು ಬ್ರಷ್‌ ತಗೊಳಿ ಸಾರ್‌  ಇಲ್ಲಾಂದ್ರೆ ಊಟಕ್ಕೆ ಗತಿ ಇಲ್ಲ… ಅಂತ ಅಳುಮುಖ ಮಾಡ್ಕೊಂಡ..
 
ಅಚಾನಕ್ ಆಗಿ ನನ್ನ ಕೈ ಜೇಬಿನಿಂದ ೨೦ ರೂಪಾಯಿ ತೆಗೆದುಕೊಂಡಿತ್ತು. ಆತನಿಗೆ ಕೊಟ್ಟು ಬಿಟ್ಟಿತ್ತು ಕೂಡಾ. ಬಾಯಿಯಿಂದ ಮಾತು ಹೊರಟಿತ್ತು. ಬ್ರಷ್‌ ಬೇಡ ಬಿಡು.. ಹೋಗಿ ಮೊದಲು ಊಟ ಮಾಡು ಅಂತ ಹೇಳಿಯೂ ಆಗಿತ್ತು. ಆತ ನನ್ನ ಕೈಯಿಂದ ಹಣವನ್ನು ಕಿತ್ತುಕೊಂಡು ಆಚೆ ತಿರುಗಿದ.. ಪಕ್ಕದಲ್ಲೇ ಕುಳಿತಿದ್ದ ಇನ್ನೊಬ್ಬರ ಕಾಲು ಹಿಡಿದಿತ್ತು ಆತನ ಕೈ… ಅದೇ ಮಾತು…
 
ಬೆಚ್ಚಿ ಬಿದ್ದೆ ನಾನು. ಕೋಪ ಕೂಡಾ ಬಂದಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಆತನಿಗೆ ಹಣ ಕೊಟ್ಟಾಗಿತ್ತು. ಕೂಡಲೇ ಎಚ್ಚೆತ್ತು ಕೊಂಡೆ.. ದುಡ್ಡು ಕೊಟ್ಟ ನನ್ನ ಅದೇ ಕೈ ಆತನ ಬೆನ್ನ ಮೇಲೊಂದು ಗುದ್ದು ಕೊಟ್ಟಿತ್ತು. ಬಾಯಿ ಕೋಪದಿಂದ ಕಿರುಚಿತು. “ಏಯ್‌ ! ಇಳ್ದು ಹೋಗ್ತಿಯಾ ಇಲ್ಲಾ ಒದೀಲಾ !” ಆತ ಅಲ್ಲಿಂದ ಮುಂದೆ ಹೋಗಿ ಮತ್ತೆ ಅದೇ ಕಾಯಕಕ್ಕೆ ನಿಂತ ಹಿಂದೆ ತಿರುಗಿ ನೋಡ್ತಾ…
 
ನನ್ನ ಸಿಟ್ಟು ನೆತ್ತಿಗೇರಿತ್ತು. ಕುಳಿತಲ್ಲಿಂದ ಹಾಗೇ ಮೇಲಕ್ಕೆ ಎದ್ದಿದ್ದೆ… ಮತ್ತೆ ಕೂಗಾಡಿದೆ. ” ಏಯ್ ನಿಂಗೇ ಹೇಳಿದ್ದು… ಒಂದ್ಸಲ ಹೇಳಿದ್ರೆ ಅರ್ಥ ಆಗತ್ತೋ ಇಲ್ವೋ ! ದುಡ್ಡು ಕೊಟ್ಟ ಮೇಲೆ ಹೋಗಿ ಉಣ್‌ಬೇಕಪ್ಪಾ ಮತ್ತೆ ಅದೇ ರಾಗ ಎಳೆದ್ರೆ…”
 
ಅಷ್ಟರಲ್ಲಿ ಉಳಿದವರೆಲ್ಲಾ ನನ್ನ ನೋಡ್ತಿರೋದು ಗೊತ್ತಾಯ್ತು… ಹಾಗೇ ಸೈಲೆಂಟಾಗಿ ಕುಳಿತೆ… ಎಲ್ಲರನ್ನೂ ನೋಡ್ತಾ.. ಯಾರಿಗೂ ವಿಷಯ ಅರ್ಥ ಆಗಿಲ್ಲ.. ನಾನೂ ಸುಮ್ಮನಾದೆ ವಿವರಣೆ ಕೊಡದೇ..
 
                                                                                                                      ****
ಹೀಗೆ ಎರಡು ಘಟನೆ ನಡೆದ ಮೇಲೆ ಯೋಚಿಸ್ತಾ ಇದ್ದೇನೆ ! ವ್ಯಾಪಾರಕ್ಕೆ ಎಷ್ಟು ಮುಖ ? ನಿಮಗೇನಾದ್ರೂ ಗೊತ್ತಾ…. ಗೊತ್ತಾದ್ರೆ ನಂಗೂ ಸ್ವಲ್ಪ ತಿಳಿಸಿ ಓ.ಕೆ. ನಾ ? ;)

ಆಕ್ಸಿಡೆಂಟ್ ಆದಾಗ ನೆನಪಾದ್ಳು ಆ ಚೆಲುವೆ

herohonda splendor NXGಬೆಳಗ್ಗೆ ಕಚೇರಿಗೆ ಆಗಮಿಸುವ ಧಾವಂತ. ಸುಂಕದಕಟ್ಟೆಯಿಂದ ನಮ್ಮ ಆಫೀಸ್‌ಗೆ ಕೇವಲ ೧೨ ಕಿ.ಮೀ. ಆದರೂ ಬೆಂಗಳೂರಿನ ಟ್ರಾಫಿಕ್‌ ನಡುವೆ ಅದು ದೂರವೇ ! ನಂಗೋ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಹೋಗೋ ಹುಚ್ಚು. ಮೈಸೂರು ರೋಡ್ ಮೂಲಕವೇ ಹೋಗಬೇಕು ಅಂತಿದ್ದೋನು ನಾನು.  ಹೀಗೆ ಸುತ್ತಾಡಿಕೊಂಡು ಹೋಗೋದಾದ್ರೆ ಬರೋಬ್ಬರಿ ೧೭ ಕಿ.ಮೀ. ಆಗತ್ತೆ. ಆದರೂ ಟೈಮ್ ಸೇವ್ ಆಗತ್ತೆ ಅಂತಿದ್ದೆ ಯಾರೇ ಕೇಳಿದ್ರು.

ಮೈಸೂರು ರಸ್ತೆಯೇನೂ ಟ್ರಾಫಿಕ್‌ ಇಲ್ದ ರಸ್ತೇನೇ ಅಂದ್ರೆ ಅಲ್ಲ… ಆದ್ರೂ ಮಾಗಡಿ ರಸ್ತೆಗಿಂತ ಬೆಟರ್‍ ಅನ್ನೋದೆ ನನ್ನ ವಾದ. ಮಾಗಡಿ ರಸ್ತೆಯಲ್ಲಿ ವಾಹನಗಳು ತೆವಳಿಕೊಂಡು ಹೋಗ್ತಾವೆ. ಮೈಸೂರು ರಸ್ತೇಲಿ ಎಟ್‌ಲೀಸ್ಟ್ ನಡೆದುಕೊಂಡಾದ್ರೂ ಹೋಗ್ತಾವಲ್ಲ ಅನ್ನೋದೇ ಸಮಾಧಾನ. ಆದರೆ ಗ್ರಹಚಾರ ನೋಡಿ ಎಲ್ಲಿ ಬೇಕಾದ್ರೂ ಹೇಗೆ ಬೇಕಾದ್ರೂ ವಕ್ಕರಿಸತ್ತೆ ಅನ್ನೋ ಹಿರಿಯ ಮಾತು ಸತ್ಯ ಅಂತ ಅನ್ನಿಸಿದ ಆ ಕ್ಷಣ….

ಅಂದು ೨೦೦೯ ಸೆಪ್ಟಂಬರ್‍ ೨೨.  ಹಿಂದಿನ ದಿನವೆ ಕಚೇರಿಯಿಂದ ನಮ್ ಚಾನೆಲ್ ಇನ್‌ಪುಟ್ ಇನ್‌ಚಾರ್ಜ್‌ ಫೋನಾಯಿಸಿ, ನಾಳೆ ಬಿಬಿಎಂಪಿ ಮೀಸಲು ಪಟ್ಟಿ ಘೋಷಣೆ ಮಾಡಬಹುದು. ಮೊದಲು ನಮ್ಮಲೇ ಬ್ರೇಕಿಂಗ್‌ ನ್ಯೂಸ್‌ ಹೋಗಬೇಕು. ಯಾವುದೆ ಕಾರಣಕ್ಕೂ ಮಿಸ್ ಆಗಬಾರದು ಅನ್ನೋ ತಾಕೀತು ಬೇರೆ. ಯಾವತ್ತೂ ಇಂತಹ ತಾಕೀತು ಕೇಳದ ನನಗೆ ಅಂದು ಕೊಂಚ ದಿಗಲು. ಏನೋಪ್ಪ ಇದು ಅಂತ. ಇಷ್ಟು ಸಾಕಾಯ್ತು. ಬೆಳಗ್ಗೆ ೮.೩೦ಕ್ಕೇ ಹೊರಟೆ ಆಫೀಸಿಗೆ. 

ಮಾಮೂಲಿ ರಸ್ತೆ ಅದೇ ಹೊರವಲಯದ ರಿಂಗ್ ರೋಡ್… ಅಂಬೇಡ್ಕರ್‍ ಕಾಲೇಜು… ನಾಗರಬಾವಿ ರಸ್ತೆ… ಚಂದ್ರಾಲೇಔಟ್ ಬಂದಾಗ ಒಂದು ಬ್ರೇಕ್‌ ತಗೊಂಡೆ. ಅಲ್ಲೊಬ್ಬರು ಒಂದು ಡಿವಿಡಿ ಕೊಟ್ಟು ವಿಶೇಷ ಕಾರ್ಯಕ್ರಮದ್ದು ಇದು. ನಿಮ್ಮಲ್ಲಿ ಹಾಕಿಸಿ ಎಂದು ವಿನಂತಿಸಿದ್ರು. ಅಲ್ಲಿಂದ ಹೊರಟೆ ನೋಡ್ರಿ… ಇನ್ನೇನು ಬಂದು ಮೈಸೂರು ರಸ್ತೆಗೆ ಎಂಟ್ರಿ ತಗೊಂಡೆ.  ಫುಲ್‌ ಟ್ರಾಫಿಕ್…

ಹಾಗೂ ಹೀಗೂ ವಾಹನಗಳ ನಡುವೆ ಸಿಕ್ಕ ಸಂದಿಗೊಂದಿಗಳಲ್ಲಿ ಎರಡು ಚಕ್ರದ ರಥವನ್ನು ಕೊಂಡೊಯ್ದೆ. ಬ್ಯಾಟರಾಯನಪುರ ಪೊಲೀಸ್‌ ಸ್ಟೇಶನ್ ಬಳಿ ತಲುಪಿದಾಗ ಅಲ್ಲಿ ರಸ್ತೆ ಪೂರ್ತಿ ವಾಹನಗಳು ನಿಂತಿದ್ದವು. ಮಧ್ಯ ಭಾಗದಲ್ಲಿ ರಸ್ತೆ ಉದ್ದಕ್ಕೂ ಖಾಲಿ ಇದ್ದುದು ನೋಡಿ ಖುಷಿ ಆಯ್ತು. ಇನ್ನೇನು ಅಲ್ಲೇ ಹೋದ್ರೆ ಘಾಳಿ ಆಂಜನೇಯ ದೇವಸ್ತಾನದ ಮುಂದಿನ ಮೋರಿ ದಾಟಿ ಬಿಡ್ತೀನಲ್ಲ ಎಂಬ ಸಂತೋಷದಿಂದ ಬೈಕ್‌ ಮುಂದಕ್ಕೋಡಿತು. ಇನ್ನೇನು ಘಾಳಿ ಆಂಜನೇಯನ ಗುಡಿ ಎದುರಲ್ಲೇ ಪುಣ್ಯಾತ್ಮ ಅದೆಲ್ಲಿಂದ ಬಂದನೋ…

ಏಯ್…….. ! ಎಂದು ಜೋರಾಗಿ ಕೂಗೀದ್ದೇ ಬಂತು… ಅಷ್ಟರಲ್ಲಾಗಲೇ ಆತ ನನ್ನ ಬೈಕ್‌  ಮುಂದಕ್ಕೆ ಬಂದಿದ್ದ. ಅವನು ಬೀಳದೇ ಸಾವರಿಸಿಕೊಂಡ.. ಆದ್ರೆ ನಾನೋ… ಬೈಕ್‌ ಕಂಟ್ರೋಲ್‌ ತಪ್ಪಿತ್ತು. ಅವನಿಗೂ ಹೊಡೆದ ಬಳಿಕ ಮುಂದೆ ನಿಂತಿದ್ದ ಖಾಸಗಿ ಬಸ್‌ ಹಿಂಬದಿ ಹೇಗಿದೆ ಎಂದು ನೋಡಿದೆ. ಬೈಕ್‌ ನೇರ ಬಸ್‌ ಅಡಿಗೆ ಹೋದ್ರೆ ನಾನು ಬಸ್‌ ಹಿಂಬದಿ ಬಾಡಿಗೆ ನನ್ನ ಬಾಡಿ ಟಚ್‌ ಮಾಡಿಕೊಂಡಿದ್ದೆ. 

 ಸುತ್ತಲೂ ನೋಡಿದೆ….  ಎದುರಿಗೆ ಬಂದ ಪುಣ್ಯಾತ್ಮ ಅಲ್ಲೆಲ್ಲೂ ಕಾಣಲಿಲ್ಲ.  ಬೈಕ್ ಹೋಯಿತೆಂದೇ ಭಾವಿಸಿದ ನಾನು ಮೆಲ್ಲನೇ ಸಾವರಿಸಿಕೊಂಡು ಎದ್ದೆ. ಯಾರೂ ಕಾಣಿಸಲಿಲ್ಲ. ಮೆಲ್ಲನೆ ಬೈಕ್ ಮೇಲೆತ್ತಿದೆ. ಕೈ ಯಾಕೋ ನೋವು ಅಂತ ಅನ್ನಿಸ್ತಾ ಇತ್ತು. ಆದರೂ ಅದೇ ಸ್ಪಿರಿಟ್‌ನಲ್ಲಿ ಮತ್ತೆ ಬೈಕ್ ಸ್ಟಾರ್ಟ್‌ ಮಾಡಿದೆ.  ಖಾಸಗಿ ಬಸ್‌ ಹಿಂದೆ ಬಿಎಂಟಿಸಿ ಬಸ್‌ ನಿಂತಿತ್ತು.

ಅವುಗಳ ನಡುವೆ ಮತ್ತೆ ತೂರಿಸಿದೆ ನನ್ನ ಬೈಕ್‌ನ.. ಇನ್ನೇನು ಮುಂದಕ್ಕೆ ನುಗ್ಗಬೇಕು ಎನ್ನುವಷ್ಟರಲ್ಲೇ ಇನ್ನೊಂದು ಬೈಕ್‌ ಅಲ್ಲೇ ಮುನ್ನುಗ್ಗಬೇಕೆ ! ಎದೆ ಝಲ್ಲೆಂದಿತು. ಅಬ್ಬಾ ! ಬದುಕಿದೆಯಾ ಬಡಜೀವಾ ಎಂದು ಸುಧಾರಿಸಿಕೊಂಡು ಮುಂದೆ ಹೋಗಿ ಬೈಕ್‌ಗೆ ಢೀ ಕೊಟ್ಟ ಪಾದಚಾರಿಯನ್ನು ಮುಖವನ್ನು ಒಮ್ಮೆ ನೋಡಿದೆ.  ಏನೂ ನಡೆದೇ ಇಲ್ಲವೆಂಬಂತೆ ಆತ ಸಾಗುತ್ತಿದ್ದ.

ಅಯ್ಯಾ ದೊರೆ… ಯಾವ ಲೋಕದಲ್ಲಿದ್ದೀಯಾ ಎಂದು ಕೇಳಿದ್ರೆ ಉತ್ತರವೇ ಇಲ್ಲ. ಮತ್ತೆ ಕೇಳಿದೆ.. ಆತನ ಬಾಯಿ ಮೆಲ್ಲನೆ ಅದುರಿತು. ಆದರೆ ಶಬ್ದ ಹೊರಬರಲೇ ಇಲ್ಲ. ಇನ್ನೇನಿದ್ರೂ ಮಾತಾಡಿ ಲಾಭವಿಲ್ಲ ಅಂದು ಕೊಂಡು ಆಫೀಸಿನತ್ತ ಮುನ್ನುಗ್ಗಿದೆ.  ಹೌದೂ ನಾನು ಬಿದ್ದಾಗ ಎಬ್ಬಿಸಲೂ ಯಾರೂ ಯಾಕೆ ಬರಲೇ ಇಲ್ಲ….

ಹಾಗೇ ನೆನಪಿನ ಸುರುಳಿ ಬಿಚ್ಚಿಕೊಂಡಿತು. ೨೦೦೪ ಸಮ್‌ ವೇರ್‍ ಸೆಪ್ಟಂಬರ್‍ ಇರಬೇಕು. ಸರಿಯಾಗಿ ನೆನಪಿಲ್ಲ ದಿನಾಂಕ. ಶೇಷಾದ್ರಿಪುರಂ ಕೆನರಾಬ್ಯಾಂಕ್ ಎದುರು ನಡೆದುಕೊಂಡು ಸ್ವಸ್ತಿಕ್ ವೃತ್ತದ ಕಡೆಗೆ ಹೊರಟಿದ್ದೆ. ಬಜಾಜ್ ಸ್ಕೂಟರ್‍ ಒಂದು ಢೀ ಕೊಟ್ಟದ್ದಷ್ಟೇ ಗೊತ್ತು. ನನಗಲ್ಲಾರಿ…

ಸುಂದರಿಯೊಬ್ಬಳು ರಸ್ತೆ ದಾಟುವ ಧಾವಂತದಲ್ಲಿದ್ಳು. ಪಾಪ… ಆ ಸ್ಕೂಟರ್‍ನವನೂ ಅದೆಲ್ಲಿಗೋ ಹೋಗುವ ಧಾವಂತದಲ್ಲಿದ್ದ.  ಆಕೆಗೆ ಢೀ ಕೊಟ್ಟ ಬಳಿಕ ಆತ ಸ್ಕೂಟರ್‍ ನಿಲ್ಲಿಸಲಿಲ್ಲ. ಹಾಗೇ ಮುಂದಕ್ಕೋಡಿದ್ದ. ಅಷ್ಟರಲ್ಲಾಗಲೇ ಅಲ್ಲಿ ಜನ ಸೇರಿಯಾಗಿತ್ತು. ಆಕೆಯನ್ನು ಬದಿಗೆ ಕರೆ ತಂದಿದ್ದರು. ಎಲ್ಲರೂ ಆಕೆಗೆ ಸಹಾಯ ಹಸ್ತ ಚಾಚೋರೆ.. ಆದರೆ ಆಕೆ ಅವರಿಂದ ತಪ್ಪಿಸಿಕೊಂಡು ನಡೆದು ಹೋಗುತ್ತಿದ್ದ ನನ್ನ ಬಳಿ ಹೆಜ್ಜೆ ಹಾಕಿದ್ಳು. ಮೆಲುದನಿಯಲ್ಲಿ ಉಸುರಿದಳು… ”ನಂಗೆ ಹೆಲ್ಪ್‌ ಮಾಡ್ತೀರಾ ಪ್ಲೀಸ್‌ “…

ಸಹಾಯ ಕೇಳಿದ್ ಮೇಲೆ ಮಾಡಿದಿದ್ರೆ ಹೇಗೆ ?  ಸುಂದರಿ ಅಲ್ವೇ !  ಆಕೆಯ ಮೊಣಕೈ ಗಾಯ ತೊಳೆದದ್ದೂ ಆಯ್ತು.. ಅದಕ್ಕೆ ಸಮೀಪದಲ್ಲೇ ಇದ್ದ ಮೆಡಿಕಲ್ ಷಾಪ್‌ನಿಂದ ಮುಲಾಮ್  ಪಡೆದು ಹಚ್ಚಿದ್ದೂ ಆಯ್ತು. ಇನ್ನೇನು ಸಾಕಲ್ವೇ ಅಂದ್ರೆ ರಸ್ತೆ ದಾಟೋಕೆ ಸ್ವಲ್ಪ ಹೆಲ್ಪ್ ಮಾಡ್ತೀರಾ ಎಂದು ಉಲಿದಳಾಕೆ…  ಹಾಗೇ.. ಬೆಳಗ್ಗಿನ ಆ ಟ್ರಾಫಿಕ್‌ನಲ್ಲಿ ಆಕೆಯ ಕೈ ಹಿಡಿದು ರಸ್ತೆ ದಾಟಿಸಿದ್ದಾಯ್ತು.  ಮೆಲ್ಲ ಮೆಲ್ಲಗೇ ಶುರುವಾಯ್ತು ಮನದ ಮಾತು…

ಹೆಸರೇನು ?

ಗ್ರೀಷ್ಮಾ..

 ಏನ್ ಮಾಡ್ತಿದ್ದೀರಾ ?

ಬಿಎಎಂಎಸ್

ಮನೆಯಲ್ಲಿ ಯಾರಿದ್ದಾರೆ ?

ನಂಗೆ ಅಪ್ಪ ಅಮ್ಮ ಇಬ್ಬೂ ಇಲ್ಲ. ಆಕ್ಸಿಡೆಂಟ್‌ನಲ್ಲಿ ತೀರ್‍ಕೊಂಡ್ರು. ತಮ್ಮ ಒಬ್ಬ ಇದ್ದಾನೆ. ತುಮಕೂರಲ್ಲಿ ಹಾಸ್ಟೆಲ್‌ನಲ್ಲಿದ್ದಾನೆ. ನಾನು ಇಲ್ಲಿ ಪೇಯಿಂಗ್‌ ಗೆಸ್ಟ್ ಆಗಿದ್ದೇನೆ. ಪಾರ್ಟ್‌ ಟೈಂ ಕೆಲ್ಸ ಕೂಡಾ ಮಾಡ್ತಿದ್ದೇನೆ ಎನ್ನುತ್ತಿದ್ದಾಗಲೇ ಆಕೆಯ ಪಿಜಿ ಕಣ್ಣೆದುರಿತ್ತು….

ಅರೆ..! ಇನ್‌ಫೆಂಟ್ರಿ ರಸ್ತೆಯಲ್ಲಿರೋ ನಮ್ ಆಫೀಸ್‌ ಕೂಡಾ ತಲುಪಿದ್ದೆ. ನನ್ನ ತಲೆಯಲ್ಲಿ ಹರಿಯತ್ತಿದ್ದ ಪ್ರಶ್ನೆ ಒಂದೇ… ನಂಗೂ ಆಕ್ಸಿಡೆಂಟ್ ಆಯ್ತಲ್ಲಾ ಆಗ ಯಾಕೆ ಹೆಲ್ಪ್‌ ಮಾಡೋಕೆ ಯಾರೂ ಬರಲಿಲ್ಲಾ…… :(

ಆಗಲೇ ತಡವಾಗಿತ್ತು. ಅಲ್ಲೂ ನನ್ನ ಆಕ್ಸಿಡೆಂಟ್ ವಿಚಾರ ಹೇಳಿ ಕೆಲಸಕ್ಕೆ ತೊಡಗಿಕೊಂಡೆ. ಆದರೆ ಆಕ್ಸಿಡೆಂಟ್ ಪರಿಣಾಮ ಆಮೇಲೆ ಗೊತ್ತಾಯ್ತು. ಗಾಡಿಗೇನೂ ಆಗಿಲ್ಲ… ಎಲ್ಲವೂ ಆಗಿದ್ದು ನನ್ನ bodyಗೇ.. ಎಡಭುಜದ ಸಮೀಪ ಹೇರ್‍ಲೈನ್ ಫ್ರಾಕ್ಚರ್‍…! ಹತ್ತಿಪ್ಪತ್ತು ದಿನ ಚಿಕಿತ್ಸೆಯ ಸಜೆ  :(

“ರಾಜ”ಕಾರಣದಲ್ಲಿ ಕುಮಾರಸ್ವಾಮಿ…!

ಚಿತ್ರಕೃಪೆ - ಹಿಂದು ಡಾಟ್‌ ಕಾಮ್‌ ಮತ್ತು ಚುರುಮುರಿ

ಚಿತ್ರಕೃಪೆ - ಹಿಂದು ಡಾಟ್‌ ಕಾಮ್‌ ಮತ್ತು ಚುರುಮುರಿ

 

ದೇವೇಗೌಡರ ರಾಜಕೀಯ ಲೆಕ್ಕಾಚಾರದ ಬಗ್ಗೆ ರಾಜಕೀಯ ವಲಯ ಮಾತನಾಡತ್ತೆ. ಹಾಗಾದ್ರೆ ಈ ಸಲದ ಲೆಕ್ಕಾಚಾರ ಏನು ? ದೇವೇಗೌಡರು ತಮ್ಮ ಮಗನನ್ನೇಕೆ ಮುಂದೆ ಬಿಟ್ಟರು ? ಹಿಂದೆ ರಾಜ್ಯದಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದಾಗಲೂ ಇದೇ ನಡೆಯನ್ನು ದೇವೇಗೌಡರು ಅನುಸರಿಸಿದ್ದರು. ಏನೀ ಲೆಕ್ಕಾಚಾರ ಕೊಂಚ ಇತಿಹಾಸದ ಜೊತೆ ಸಮೀಕರಿಸಿ ನೋಡಿ…
 
ದೇವೇಗೌಡ ಚಾಣಕ್ಷ ರಾಜಕಾರಣಿ. ಕುಟುಂಬ ರಾಜಕಾರಣಕ್ಕೆ ಹೆಸರುವಾಸಿ. ಅವಕಾಶವಾದಿ ರಾಜಕಾರಣ ಅದರಲ್ಲೂ ಸ್ವಾರ್ಥ ತುಂಬಿರತ್ತೆ ಅನ್ನೋ ಮಾತುಗಳಿಗೇನೂ ರಾಜಕೀಯವಲಯದಲ್ಲಿ ಕೊರತೆ ಇಲ್ಲ. ಹೀಗೆ ರಾಜಕೀಯ ಲೆಕ್ಕಾಚಾರ ಹಾಕಿದ್ದರಿಂದಲೇ ಅವರು ಭಾರತದ ಪ್ರಧಾನಿಯೂ ಆದರು. ಕಿಂಗ್ ಆಗಬೇಕು ಇಲ್ಲಾ ಕಿಂಗ್ ಮೇಕರ್ ಆಗಬೇಕು ಅನ್ನೋದು ದೇವೇಗೌಡರ ಹಂಬಲ. ದೇವೇಗೌಡರ ರಾಜಕೀಯ ಜೀವನ ನೋಡಿದರೆ, ಅವರ ನಡವಳಿಕೆಯಿಂದ ಬೇಸತ್ತು ಪಕ್ಷ ತ್ಯಜಿಸಿದವರೇ ಹೆಚ್ಚಾಗಿ ಕಾಣಿಸುತ್ತಾರೆ. ಕುಟುಂಬ ರಾಜಕಾರಣಕ್ಕಾಗಿ ಪಕ್ಷವನ್ನೇ ಹೈಜಾಕ್ ಮಾಡಿದವರು ಅನ್ನೋ ಆರೋಪ ಕೂಡಾ ಅವರ ಮೇಲಿದೆ.  ಈ ಆರೋಪಕ್ಕೆ ತಕ್ಕಂತೆ ಅವರು ಪಕ್ಷದಲ್ಲಿ ಬೇರೆ ಯಾವ ನಾಯಕನನ್ನೂ ಬೆಳೆಯಗೊಡಲಿಲ್ಲ. ಕುಮಾರಸ್ವಾಮಿ ಬಿಟ್ಟರೆ ಬೇರಾವ ನಾಯಕರೂ ಅಲ್ಲಿ ಮಿಂಚಲಿಲ್ಲ. ಈ ಎಲ್ಲ ಹಿನ್ನೆಲೆ ಇರಿಸಿಕೊಂಡು ಈಗ ಯಾವ ರೀತಿ ರಾಜಕಾರಣ ನಡೆಯೊತ್ತೆ ಅನ್ನೋದನ್ನ ಗಮನಿಸೋಣ.

 

ಈಗೇನು ರಾಜಕೀಯ ?

ಈಗ ಕೇಂದ್ರದಲ್ಲಿ ಸ್ಥಿರ ಸರಕಾರ ನೀಡೋದಕ್ಕಾಗಿ ಯುಪಿಎಗೆ ೨೬೧ ಸೀಟುಗಳನ್ನು ಮತದಾರ ಪ್ರಭು ಕರುಣಿಸಿದ್ದಾರೆ. ಇಲ್ಲಿ ಸರಳ ಬಹುಮತ ನಿರೂಪಿಸೋದಕ್ಕೆ ಯುಪಿಎಗೆ ಬೇಕಾದ ಸೀಟುಗಳ ಸಂಖ್ಯೆ ೧೧. ಇದನ್ನು ನಿಭಾಯಿಸೋದು ಕಾಂಗ್ರೆಸ್‌ಗೇನೂ ಕಷ್ಟವಾಗಲ್ಲ.

ಚುನಾವಣಾ ಪೂರ್ವದಲ್ಲಿ ಲೋಕಸಭೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತೃತೀಯರಂಗಕ್ಕೇ ಹೆಚ್ಚು ಅವಕಾಶ ಅನ್ನೋ ವಾದ ಇತ್ತು. ಇದಕ್ಕೆ ಪೂರಕವಾಗಿ ಮಾರ್ಚ್ ತಿಂಗಳಲ್ಲಿ ಡಾಬಸ್‌ಪೇಟೆಯಲ್ಲಿ ತೃತೀಯರಂಗದ ಸಮಾವೇಶ ನಡೆಸಿ ರಾಷ್ಟ್ರಮಟ್ಟದಲ್ಲಿಲ ರಾಜಕೀಯ ಗಮನಸೆಳೆದವರೇ ದೇವೇಗೌಡರು. ದೇವೇಗೌಡರ ಸಾರಥ್ಯ ಎಂದರೆ ಕೇಳಬೇಕೆ ? ರಾಜಕೀಯ ಚದುರಂಗದಾಟ ಅರೆದು ಕುಡಿದವರು ದೇವೇಗೌಡ. ಹೀಗಾಗಿ ತೃತೀಯರಂಗ ಮತ್ತೆ ಚಿಗುರಿ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರತ್ತೆ ಅನ್ನೋ ಮಾತೇ ಕೇಳಿತ್ತು.

ರಾಜ್ಯದಲ್ಲಿ ಚುನಾವಣೆಗೆ ಎರಡು ಕಡೆ ತೃತೀಯರಂಗದ ಮಿತ್ರಪಕ್ಷ ಎಡಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ನೆರವಾಯಿತು. ಇದೇ ವೇಳೆ ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲು ಅವಕಾಶ ಮಾಡಿಕೊಟ್ಟಿತು. ಇನ್ನೇನು ಚುನಾವಣಾ ಫಲಿತಾಂಶಕ್ಕೆ ನಾಲ್ಕುದಿನ ಬಾಕಿ ಇದೆ ಎಂದಾಗ ರಾಜಕೀಯದಲ್ಲೊಂದು ಸಂಚಲನ ಕಾಣಿಸಿಕೊಂಡಿತು.

ಸೋನಿಯಾ ಭೇಟಿ

ಅಂದು ಮೇ ೧೨. ರಾತ್ರಿ ೮ರ ಸಮಯ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಯಲ್ಲಿ ಸೋನಿಯಾ ಮನೆ ಮುಂದೆ ಕಾಣಿಸಿಕೊಂಡಿದ್ದರು. ಜೊತೆಯಲ್ಲಿ ಬಳ್ಳಾರಿಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರೂ ಇದ್ದರು. ಆದ್ರೇನು ಕಾಲ ಮಿಂಚಿಹೋಗಿತ್ತು. ಕುಮಾರಸ್ವಾಮಿ ಮಾಧ್ಯಮ ಕೆಮರಾ ಕಣ್ಣಿಗೆ ಬಿದ್ದಿದ್ರು. ಬೇರೆ ವಿಧಿ ಇಲ್ದೇ ಮಾಧ್ಯಮದ ಮುಂದೆ ಬಾಯ್ಬಿಡಬೇಕಾಯಿತು.

ಅಂದು ಅವರು ಹೇಳಿದ್ದೇನು ಗೊತ್ತೆ ? ರಾಜ್ಯದಲ್ಲಿ ಬಿಜೆಪಿ ಸರಕಾರದ ದುರಾಡಳಿತ ಹೆಚ್ಚಾಗಿದೆ. ಇದರ ಬಗ್ಗೆ ಸೋನಿಯಾ ಜೊತೆ ಚರ್ಚಿಸಬೇಕಿತ್ತು. ಅದಕ್ಕೆ ಬಂದೆ. ತೃತೀಯ ರಂಗಕ್ಕೆ ಇದರಿಂದ ಏನೂ ತೊಂದರೆ ಇಲ್ಲ. ಇದರ ಬಗ್ಗೆ ಎಡಪಕ್ಷದ ನಾಯಕರಾದ ಡಿ.ರಾಜಾ ಮತ್ತು ಪ್ರಕಾಶ್ ಕಾರಟ್ ಅವರಿಗೂ ಮನವರಿಕೆ ಮಾಡಲಾಗಿದೆ ಅಂತ ದೆಹಲಿಯಲ್ಲಿ ಲಿಖಿತ ಹೇಳಿಕೆ ಕೂಡಾ ನೀಡಿದ್ರು.

ದೇವೇಗೌಡ ಪತ್ರಿಕಾಗೋಷ್ಠಿ

ಇದರ ಬೆನ್ನಲ್ಲೇ ಅಂದ್ರೆ ಮರುದಿನ ಬೆಂಗಳೂರಿನಲ್ಲಿ ದೇವೇಗೌಡರು ಇನ್ನೊಂದು ಪತ್ರಿಕಾಗೋಷ್ಠಿ ಕರೆದಿದ್ರು. ಅದೂ ತಮ್ಮ ನಿವಾಸ ಅಮೋಘದಲ್ಲಿ. ಮನೆಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ ಅಂದ್ರೆ ಅಲ್ಲಿ ಏನೋ ರಾಜಕೀಯ ವಿಶೇಷ ಇದೆ ಎಂದೇ ಅರ್ಥ ಮಾಡಿಕೊಳ್ಬೇಕು ಅಂತ ಹೇಳ್ತಾರೆ ಜೆಡಿಎಸ್ ನಿಷ್ಠರು.

ಮೇ ೧೩ ಮಧ್ಯಾಹ್ನ ೨ ಗಂಟೆ. ದೇವೇಗೌಡರು ಮಾಧ್ಯಮದ ಮುಂದೆ ಹೇಳಿದ್ದಿಷ್ಟು

” ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ. ರಾಜ್ಯದ ರಾಜಕೀಯದ ಬಗ್ಗೆ ಸೋನಿಯಾ ಜೊತೆ ಮಾತುಕತೆ ನಡೆಸಿದ್ದಾರೆ. ಅದನ್ನು ಲಿಖಿತವಾಗಿಯೇ ಹೇಳಿದ್ದಾರೆ. ಆದರೆ ತನಗೆ ಈ ಭೇಟಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಕೋಮುವಾದಿ ಬಿಜೆಪಿ ದೂರ ಇಡೋದಕ್ಕೆ ನಾನು ಓಪನ್ ಕಾಲ್ ಕೊಟ್ಟಾಗ ಇಷ್ಟು ಸುದ್ದಿ ಮಾಡಿರಲಿಲ್ಲ. ಕುಮಾರಸ್ವಾಮಿ ಮುಖ ಮರೆಸಿರಲಿಲ್ಲ. ಆತ ಹೋದಾಗ ಅಲ್ಲಿ ೪೮ ಡಿಗ್ರಿ ಸೆಲ್ಸಿಯಸ್ ಇತ್ತು. ಹಾಗಾಗಿ ಸೆಕೆಗೆ ಗಾಳಿ ಬೀಸ್ತಿದ್ದ. ಅದನ್ನೇ ಮುಖ ಮರೆ ಮಾಚಿದ ಅಂತ ಪ್ರಚಾರ ಮಾಡಿದ್ರಲ್ಲಾ ?
ಕುಮಾರಸ್ವಾಮಿಗೆ ಬಿಜೆಪಿಯವರು ಕೊಟ್ಟ ಕಷ್ಟ ಏನ್ ಕಡಿಮೇನಾ ? ಜೆಡಿಎಸ್‌ಗೂ ಕಷ್ಟ ಕೊಟ್ಟಿದ್ದಾರೆ. ಅದಕ್ಕೂ ಹೆಚ್ಚಾಗಿ ರಾಜ್ಯದ ರೈತಾಪಿ ಜನರು… ಈಗ ಹೇಳಿ ಭೇಟಿ ಮಾಡಿದ್ದು ತಪ್ಪಾ ?
ಇಷ್ಟಕ್ಕೂ ತೃತೀಯ ರಂಗದ ಸಮಾವೇಶ ನಡೆಸಿದ್ದೇ ಜೆಡಿಎಸ್. ಹೀಗಾಗಿ ಜೆಡಿಎಸ್ ತೃತೀಯ ರಂಗದ ಆಧಾರ ಸ್ತಂಭವಾಗಿಯೇ ಉಳಿಯುತ್ತದೆ. ಈ ಭೇಟಿಯಿಂದ ತೃತೀಯರಂಗಕ್ಕೇನೂ ಮುಳುವಿಲ್ಲ. ಟಿಆರ್‌ಎಸ್ ತೃತೀಯ ರಂಗ ಬಿಟ್ಟಿಲ್ಲ. ತೆಲುಗುದೇಶಂ ವಿಚಾರ ಬಂದಾಗ ಪಕ್ಷದ ನಿಲುವನ್ನು ಸಮರ್ಥಿಸಬೇಕಾಗುತ್ತದೆ ಎಂಬುದನ್ನು ಟಿಆರ್‌ಎಸ್ ನಾಯಕರು ತಿಳಿಸಿದ್ದರು. ಇದನ್ನು ತೃತೀಯ ರಂಗದ ನಾಯಕರು ಒಪ್ಪಿದ್ದರು. ಟಿಆರ್‌ಎಸ್ ನಾಯಕರು ಲೋಕಸಭೆ ಫಲಿತಾಂಶದ ಬಳಿಕ ನಡೆಯುವ ತೃತೀಯ ರಂಗದ ಮೊದಲ ಸಭೆಯಲ್ಲೂ ಭಾಗವಹಿಸುತ್ತಾರೆ. ನಾನು ಕೂಡಾ ಅದರಲ್ಲಿ ಪಾಲ್ಗೊಳ್ಳುತ್ತೇನೆ”

ಕುಮಾರಸ್ವಾಮಿ ಸುದ್ದಿಗೋಷ್ಠಿ

ಇದಾದ ಎರಡೇ ದಿನಕ್ಕೆ ಅಂದ್ರೆ ಮೇ ೧೫. ಮಧ್ಯಾಹ್ನ ೨ ಗಂಟೆ ಸಮಯ. ಸ್ಥಳ ಸದಾಶಿವನಗರದ ಕುಮಾರಸ್ವಾಮಿ ಗೆಸ್ಟ್ ಹೌಸ್.
ಅಲ್ಲಿ ಮಾಧ್ಯಮಕ್ಕೆ ಕುಮಾರಸ್ವಾಮಿ ಹೇಳಿದ್ದಿಷ್ಟು…

“ಕಾಂಗ್ರೆಸ್ ಆಹ್ವಾನ ಇಲ್ಲದೇ ಸೋನಿಯಾ ಭೇಟಿ ಮಾಡುತ್ತಿರಲಿಲ್ಲ.   ಭೇಟಿಯ ವಿವರಗಳನ್ನು ಶೀಘ್ರವೇ ಸೂಕ್ತ ಸಂದರ್ಭದಲ್ಲಿ ಬಹಿರಂಗಗೊಳಿಸುವೆ. ಬಿಜೆಪಿಯಿಂದ ತನಗ್ಯಾವುದೇ ತೊಂದರೆ ಆಗಿಲ್ಲ. ಈ ವಿಚಾರದಲ್ಲಿ ದೇವೇಗೌಡರ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ.
ತಮ್ಮ ಭೇಟಿಯಿಂದ ತೃತೀಯರಂಗಕ್ಕೆ ಯಾವುದೇ ತೊಂದರೆ ಆಗಲಾರದು. ಲೋಕಸಭೆ ಫಲಿತಾಂಶದ ಬಳಿಕ ನಡೆಯೋ ತೃತೀಯ ರಂಗದ ಸಭೆಯಲ್ಲಿ ದೇವೇಗೌಡರೇ ಖುದ್ದು ಭಾಗವಹಿಸುತ್ತಾರೆ “
ನೋಡಿದ್ರಲ್ಲಾ ಹೇಗೆ ಹೇಳಿಕೆಗಳು ಬದಲಾಗ್ತಾ ಹೋಗ್ತವೆ ಅಂತ. ನೋಡು ನೋಡುತ್ತಿದ್ದಂತೆ ಚುನಾವಣೆ ಫಲಿತಾಂಶ ಹೊರಬಿತ್ತು. ಎಡಪಕ್ಷಗಳು ತೀರಾ ಎಡಕ್ಕೆ ಸರಿದವು. ತೃತೀಯರಂಗಕ್ಕೆ ಇನ್ನಿಲ್ಲದಂತೆ ಮುಖಭಂಗವಾಯಿತು. ಇತ್ತ ರಾಜ್ಯದಲ್ಲಿ ಜೆಡಿಎಸ್ ನಿರೀಕ್ಷೆಯಷ್ಟು ಫಲಿತಾಂಶ ಸಿಗಲೇ ಇಲ್ಲ. ಆದರೂ ಜೆಡಿಎಸ್‌ಗೆ ಸಿಹಿಸುದ್ದಿ ಕಾದಿತ್ತು.

ಟೆಲಿಫೋನ್ ಕರೆ

ಮೇ ೧೬. ಸಂಜೆ ಕುಮಾರಸ್ವಾಮಿ ಮೊಬೈಲ್ ರಿಂಗಣಿಸಲು ಪ್ರಾರಂಭಿಸಿತ್ತು. ಯಾರ್‍ದು ಅಂತ ನೋಡಿದ್ರೆ… ರಾಜ್ಯ ಕೆಪಿಸಿಸಿ ಉಸ್ತುವಾರಿ ಗುಲಾಂ ನಬಿ ಆಜಾದ್ ಅವರದು. ಸರಿ… ಫೋನಾಯಣ ಶುರು. ರಾಜ್ಯದಲ್ಲಿ ಲೋಕಸಭೆ ಫಲಿತಾಂಶ. ೧೯ ಬಿಜೆಪಿ ಜೆಡಿಎಸ್ ಮೂರು, ಕಾಂಗ್ರೆಸ್ ಆರು. ಇನ್ನೇನು ಆಲ್‌ಮೋಸ್ಟ್ ಮಾತುಕತೆ ಸಕ್ಸಸ್…

ಮತ್ತೆ ಮಾಮೂಲಿ… ಮೇ ೧೭. ಬೆಳಗ್ಗೆ ದೇವೇಗೌಡರ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ. ಅಪ್ಪ ಮಗ ಮಾತುಕತೆ. ಜೊತೆಗೆ ಹೊಸ ಸಂಸದ ಚೆಲುವರಾಯಸ್ವಾಮಿ. ರಾಜಕೀಯ ಲೆಕ್ಕಾಚಾರ ಹಾಕಿದ್ದಾಗಿದೆ. ಹಾಗಾದ್ರೆ ಮುಂದೇನು?

ದೇವೇಗೌಡರ ದೆಹಲಿ ಭೇಟಿ ರದ್ದು. ಅನಾರೋಗ್ಯ ಕಾರಣ. ಕುಮಾರಸ್ವಾಮಿ ಚೆಲುವರಾಯಸ್ವಾಮಿ ದೆಹಲಿಗೆ ದೌಡು. ತೃತೀಯ ರಂಗದ ಸಭೆಗೆ ದೇವೇಗೌಡರ ಗೈರು… ಕುಮಾರಸ್ವಾಮಿ- ಚೆಲುವರಾಯಸ್ವಾಮಿ ತೃತೀಯರಂಗದ ಸಭೆಗೆ ಹೋಗೋ ನಿರ್ಧಾರ.

ಸಮರ್ಥನೆ ಹೇಗೆ ?

ಈಗಾಗಲೇ ಹೇಳಿದಂತೆ ಕುಮಾರಸ್ವಾಮೀನೇ ರಾಜಕೀಯ ಆಟದ ಸಾರಥ್ಯ ವಹಿಸಿದ್ದಾರೆ. ಅವರಿಗೆ ಮಂತ್ರಿಗಿರಿ ಗ್ಯಾರೆಂಟಿ ಅನ್ನೋದು ಪಕ್ಷದ ಲೆಕ್ಕಾಚಾರ.  ಹಿಂದೆ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ದೇವೇಗೌಡರು ಇದೇ ರೀತಿಯ ಮಾತುಗಳನ್ನಾಡಿದ್ದರು. ಮಗ ಮುಖ್ಯಮಂತ್ರಿ ಆದ. ಅಧಿಕಾರ ಹಸ್ತಾಂತರದ ವಿಚಾರ ಬಂದಾಗ ಬಿಜೆಪಿ ಕೋಮುವಾದಿ ಅನ್ನೋದು ನೆನಪಾಯ್ತು. ಈಗ ಮತ್ತೆ ಅಂತದ್ದೇ ನಾಟಕೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಮಗನಿಗೆ ಮಂತ್ರಿಗಿರಿ ಕೊಡಿಸೋದು ಗೌಡರ ಒಂದಂಕಿಯ ಅಜೆಂಡಾ.

ಜೆಡಿಎಸ್‌ನ ಈ ನಿಲುವಿನೊಂದಿಗೆ ತೃತೀಯ ರಂಗದ ಮಿತ್ರಪಕ್ಷಗಳಿಗೆ ಪ್ರಥಮ ಆದ್ಯತೆ ಪ್ರಾದೇಶಿಕತೆ ಎಂಬುದನ್ನು ಮತ್ತೆ ನೆನಪಿಸಿದ್ದಾರೆ ದೇವೇಗೌಡರು. ಟಿಆರ್‌ಎಸ್ ತೃತೀಯ ರಂಗ ಬಿಟ್ಟಾಗಲೂ ಇದನ್ನೇ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತೃತೀಯ ರಂಗದ ನಾಯಕರು ಒಪ್ಪಲಿ.. ಬಿಡಲಿ.. ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ನೀಡುವುದು ಖಚಿತ.

ಪತ್ರದ ರಹಸ್ಯ ಬಯಲು ಮಾಡಲು ಸಿಒಡಿ ತನಿಖೇನಾ !

ರತ್ನಗಿರಿಯ ರಹಸ್ಯ, ಚಂದ್ರಗಿರಿಯ ರಹಸ್ಯ ಹೀಗೆ ಕೆಲವು ರಹಸ್ಯಗಳೆಲ್ಲಾ ಕೇಳಿ ಗೊತ್ತು. ಇದೇನಪ್ಪಾ ಅನ್ನೋ ಕುತೂಹಲ ಹುಟ್ಟಿದ್ದು ಮೊನ್ನೆ ಏಪ್ರಿಲ್ ೩೦ರಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಮಾಧ್ಯಮದೆದುರು ಬಿಡುಗಡೆ ಮಾಡಿದ ರಹಸ್ಯ ಪತ್ರವನ್ನು ನೋಡಿದಾಗ..
ಅಷ್ಟಕ್ಕೂ ಏನಪ್ಪಾ ಅಂತ ರಹಸ್ಯ ! “ಬಿಜೆಪಿ ಪಕ್ಷವನ್ನು ಬೆಂಬಲಿಸಲು ಅಧೀನ ಅಧಿಕಾರಿ ನೌಕರರ ಸಭೆ ಕರೆಯಬೇಕು. ಈ ಪತ್ರವನ್ನು ರಹಸ್ಯವಾಗಿರಿಸಬೇಕು. ಎಂಎಂಆರ್ ಮೀಟಿಂಗ್‌ಗೆ ಆಗಮಿಸುವಾಗ ಈ ಪತ್ರ ವಾಪಸು ತಂದು ಒಪ್ಪಿಸಬೇಕು. ಯಾವುದೇ ಕಾರಣಕ್ಕೂ ಈ ರಹಸ್ಯವನ್ನು ಬಹಿರಂಗಗೊಳಿಸಬೇಡಿ. ಇವಿಷ್ಟು ಪತ್ರದ ಒಕ್ಕಣೆ. ಪತ್ರದ ಮೇಲ್ಭಾಗದಲ್ಲಿ ರಹಸ್ಯ ಎಂಬ ಹಣೆಬರಹ. ಅಲ್ಲೇ ಪಕ್ಕದಲ್ಲಿ ಬಲಬದಿಗೆ ಆಯುಷ್ ಇಲಾಖೆ, ಬೆಂಗಳೂರು, ಪತ್ರದ ಕೆಳಭಾಗದಲ್ಲಿ ಬಲಭಾಗಕ್ಕೆ ಡಾ.ಬಿ.ಎನ್.ಪ್ರಕಾಶ್, ನಿರ್ದೇಶಕರು ಎಂದು ಟೈಪಿಸಲಾಗಿದೆ. ಅದರ ಮೇಲೊಂದು ಸಹಿ. ಇಷ್ಟೇ ನೋಡಿ… ಮೇಲ್ನೋಟದ ರಹಸ್ಯ… ಇಷ್ಟು ಗಮನಿಸಿದಾಗ ಗೊತ್ತಾಗೋಯ್ತು. ಉಗ್ರಪ್ಪ ಉಗ್ರಾವತಾರ ತಾಳಿದ್ದೇಕೆ ಎಂದು !

ಏಪ್ರಿಲ್ ೩೦ ೨೦೦೯

ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎರಡನೇ ಹಂತದ ಮತದಾನ ನಡೆದುದು ಇದೇ ದಿನ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಮಾಡುತ್ತಿದೆ ಆರೋಪಿಸುತ್ತಲೇ ಬಂದರು. ಇದಕ್ಕೆ ಸಾಕ್ಷ್ಯ ಎಂಬಂತೆ ಕಾಂಗ್ರೆಸ್ ಮುಖಂಡರು ಏ.೩೦ರಂದು ಒದಗಿಸಿದ್ದು ಆಯುಷ್ ಇಲಾಖೆ ನಿರ್ದೇಶಕ ಡಾ.ಬಿ.ಎನ್.ಪ್ರಕಾಶ್ ಬರೆದಿದ್ದರು ಎನ್ನಲಾದ ರಹಸ್ಯ ಪತ್ರ. ಬಿಜೆಪಿ ಪಕ್ಷವನ್ನು ಬೆಂಬಲಿಸಲು ಅಧೀನ ಅಧಿಕಾರಿ ನೌಕರರ ಸಭೆ ಕರೆಯಬೇಕು. ಇದನ್ನು ರಹಸ್ಯವಾಗಿಡಬೇಕು ಎಂಬುದು ಈ ಪತ್ರದ ಒಕ್ಕಣೆ.

ಇದೇನಾ ರಹಸ್ಯ !

ಸಾಮಾನ್ಯವಾಗಿ ಸರಕಾರಿ ಅಧಿಕಾರಿಗಳು ಅಧೀನ ಅಧಿಕಾರಿಗಳಿಗೆ ಪತ್ರ ಬರೆಯುವಾಗ ಪತ್ರ ಸಂಖ್ಯೆ ಮತ್ತಿತರ ವಿಚಾರಗಳನ್ನು ನಮೂದಿಸುತ್ತಾರೆ.  ಕವರ್ ಮೇಲೆ ಕೂಡಾ ಅಂಚೆ ಚೀಟಿ ಅಂಟಿಸಲ್ಲ. ಆದರೆ ಈ ಪತ್ರ ರವಾನಿಸುವಾಗ ಅಂಚೆ ಚೀಟಿ ಅಂಟಿಸಲಾಗಿದೆ. ಇನ್ನು ಸಹಿ ಗಮನಿಸಿದರೆ ಡಾ.ಬಿ.ಎನ್.ಪ್ರಕಾಶ್ ಅವರ ಸಹಿಯನ್ನು ಪೋರ್ಜರಿ ಮಾಡಲು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಈ ರಹಸ್ಯ ಪತ್ರ ತಲುಪಿದ ಬಗ್ಗೆ ಏ.೨೫ರಂದೇ ಡಾ.ಬಿ.ಎನ್.ಪ್ರಕಾಶ್ ಅವರಿಗೆ ಮಾಹಿತಿ ಲಭಿಸಿತ್ತು. ಬೆಂಗಳೂರು ಮತ್ತು ತುಮಕೂರು ಜಿಲ್ಲಾ ಆಯುಷ್ ಅಧಿಕಾರಿಗಳು ಈ ಬಗ್ಗೆ ಪ್ರಕಾಶ್ ಅವರ ಗಮನ ಸೆಳೆದಿದ್ದರು. ಏ.೨೬,೨೭ ರಜೆ ಇದ್ದುದರಿಂದ ಏ.೨೮ರಂದು ಇಲಾಖೆ ಆಯುಕ್ತರಿಗೆ ಪತ್ರ ಬರೆದು ಪ್ರಕರಣ ವಿವರಿಸಿದ್ದರು. ಆದರೆ ವಿಷಯ ಬಹಿರಂಗಗೊಂಡಿದ್ದು ಕಾಂಗ್ರೆಸ್ ಮುಖಂಡರು ಏ.೩೦ರಂದು ಪತ್ರಿಕಾಗೋಷ್ಠಿ ನಡೆಸಿದಾಗಲೇ.

ವಿಳಂಬ ಯಾಕಾಯ್ತು ?

ಏ.೨೫ಕ್ಕೆ ಮಾಹಿತಿ ಸಿಕ್ಕಿದರೂ ನಿರ್ದೇಶಕ ಡಾ.ಬಿ.ಎನ್.ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಲಿಲ್ಲವೇಕೆ ? ಏಪ್ರಿಲ್ ೨೮ರಂದು ಆಯುಕ್ತರಿಗೆ ಪತ್ರ ಮುಖೇನ ತಿಳಿಸಿದ್ದರೂ ತಕ್ಷಣವೇ ಪರಿಹಾರ ಕ್ರಮ ಯಾಕೆ ಕೈಗೊಂಡಿಲ್ಲ ? ಏಪ್ರಿಲ್ ೩೦ರ ತನಕ ಸುಮ್ಮನಿದ್ದ ಇಲಾಖೆ ಅಧಿಕಾರಿಗಳು ಕೊನೆಗೂ ಈ ರಹಸ್ಯ ಪತ್ರದ ವಿಚಾರ ಬಹಿರಂಗಗೊಂಡು ಆರು ದಿನಗಳ ಬಳಿಕವಷ್ಟೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇಷ್ಟೇ ಸಾಕು. ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಹೇಳೋದಕ್ಕೆ. ಇದೇ ಇಲಾಖೆಯ ಆವರಣದಲ್ಲೇ ಇರುವ ಆಸ್ಪತ್ರೆಯ ನಂದಿನ ಹಾಲಿನ ಬೂತ್ ವಿಚಾರದಲ್ಲೂ ಇಂತಹ ಪೋರ್ಜರಿ ಪ್ರಕರಣ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಪತ್ರವೇ ಪೋರ್ಜರಿ ಎಂದು ಹೇಳಿರುವ ಡಾ.ಬಿ.ಎನ್.ಪ್ರಕಾಶ್ ಇದನ್ನು ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಈ ಬಗ್ಗೆ ವಾರದ ಬಳಿಕ ಪೊಲೀಸ್ ದೂರು ನೀಡಿದ್ದಾರೆ. ಈ ವಿಳಂಬ ನೀತಿ ಮತದಾನದ ವೇಳೆ ಅಧೀನ ಅಧಿಕಾರಿಗಳ ಮೇಲೆ ಪರಿಣಾಮ ಬೀರಿರಲಾರದೇ ? ಅಧೀನ ಅಧಿಕಾರಿಗಳು ಮತ್ತು ಅವರ ಕುಟುಂಬ ಬಿಜೆಪಿಗೆ ಮತಹಾಕಿರಲಾರದೇ ? ಇವೆಲ್ಲ ನೋಡಿದ ಬಳಿಕ ಈ ರೀತಿಯ ರಾಜಕೀಯ ಹಸ್ತಕ್ಷೇಪ ಇಲ್ಲಿ ಇನ್ನೆಷ್ಟು ನಡೆದಿರಲಾರದು ಎಂಬ ಪ್ರಶ್ನೆ ಕಾಡಿದೆ.

ನೋಡ್ತಾ ಇರಿ 3 ವರ್ಷದಲ್ಲಿ ಬೆಂಗಳೂರಿಗೆ ಬೆಂಗಳೂರೇ ಬದಲು

ಬೆಂಗಳೂರಿಗೆ ಬೆಂಗಳೂರೇ ಬದಲಾಗತ್ತಂತೆ. ಅದೂ ಬರೇ ೩ ವರ್ಷದಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಬಂದು ಅರುವತ್ತು ವರ್ಷವಾದ್ರೂ ಇನ್ನೂ ಮೂಲಸೌಕರ್ಯ ಒದಗಿಸುವ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅಂಥದ್ದರಲ್ಲಿ ಈ ಮಾತು ಕನಸೇ ಸರಿ ! ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಬೆಂಗಳೂರು ಅಭಿವೃದ್ಧಿಗೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಈಗ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್‌ಕುಮಾರ್ ಬೆಂಗಳೂರಿಗೊಂದು ಕ್ರಿಯಾಯೋಜನೆ ಘೋಷಣೆ ಮಾಡಿದ್ದಾರೆ. “ನಮ್ಮ ಬೆಂಗಳೂರು ಕಾರ್ಯಸೂಚಿ” ಹೆಸರಿನ ಕ್ರಿಯಾ ಯೋಜನೆ ಪುಸ್ತಿಕೆಯಲ್ಲಿ ಮಾದರಿ ಬೆಂಗಳೂರು ಹೇಗಿರತ್ತೆ ಎಂಬ ಕನಸು ಕಟ್ಟಿದ್ದಾರೆ. ಬೆಂಗಳೂರು ಅಭಿವೃದ್ಧಿ ಪಥದಲ್ಲಿರುವ ನಗರ. ಜನ ಸಂಖ್ಯೆ ಕೂಡಾ ಹೆಚ್ಚಾಗುತ್ತಿದೆ. ಆದರೆ ಮೂಲಸೌಕರ್ಯ ಹಿಂದುಳಿದಿದೆ. ಬಿಜೆಪಿ ಮುಖಂಡರು ಅಂದುಕೊಂಡಂತೆ ಎಲ್ಲವೂ ಕಾರ್ಯಗತವಾದರೆ ಮೂರು ವರ್ಷದಲ್ಲಿ ಬೆಂಗಳೂರಿನ ಚಿತ್ರಣವೇ ಬದಲಾಗಲಿದೆ.

nammabengaluru-action-plan courtesy - ananthkumar.org

nammabengaluru-action-plan courtesy - ananthkumar.org

ಅಷ್ಟಕ್ಕೂ ನಮ್ಮ ಬೆಂಗಳೂರು ಕ್ರಿಯಾ ಯೋಜನೆ ಏನು ಹೇಳುತ್ತದೆ ?

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದ ಯೋಜನೆ ಮತ್ತು ಕಾರ್ಯಕ್ರಮ

ಪ್ರಜಾಕೇಂದ್ರಿತ ಆಡಳಿತ ಮತ್ತು ಅಧಿಕಾರಕ್ಕಾಗಿ ನೂತನ ಶಾಸನ ರೂಪಿಸಲು ಸಿದ್ಧತೆ

ಬಿಬಿಎಂಪಿಗೆ ಪ್ರತ್ಯೇಕ ಕಾನೂನು ಜಾರಿಗೆ ಸಿದ್ಧತೆ

ಕಾನೂನು ಸುವ್ಯವಸ್ಥೆ ಮತ್ತು ರಕ್ಷಣೆ

ಎಲ್ಲ ವಾರ್ಡ್‌ಗಳಿಗೂ ಹಗಲು ರಾತ್ರಿ ಎನ್ನದೇ ನೀರು ಪೂರೈಕೆ

ಉತ್ತಮ ಗುಣಮಟ್ಟದ ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈ-ಫೈ ಸಂಪರ್ಕ,

ಸರಕಾರಿ ಏಜೆನ್ಸಿಗಳಿಗೆ ಇ-ಆಡಳಿತ

ಮೂಲಸೌಕರ್ಯ ಒದಗಿಸಲು ಖಾಸಗಿ ಸಾರ್ವಜನಿಕ ಸಹಭಾಗಿತ್ವ

ಬೆಂಗಳೂರಿನ ಬಡಜನರ ಅಭಿವೃದ್ಧಿಗಾಗಿ ಸಮಗ್ರ ನಗರ ಬಡವರ ಯೋಜನೆ

ಸಂಸ್ಕೃತಿ ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ

ಅಹಮದಾಬಾದ್ ಮಾದರಿಯಲ್ಲಿ ನದೀಪಾತ್ರಗಳ ಅಭಿವೃದ್ಧಿ

ಅರ್ಕಾವತಿ, ಸುವರ್ಣಾವತಿ, ವೃಷಭಾವತಿ ನದೀಪಾತ್ರಗಳ ನವೀಕರಣ

ಬೆಂಗಳೂರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚಿಂತನೆ

ಆದರೆ ಪ್ರಶ್ನೆ ಇರೋದೆ ಇಲ್ಲಿ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು, ಸಂಸದರ ಪ್ರಾಬಲ್ಯವಿದೆ. ಆದರೂ ಬದಲಾವಣೆ ಯಾಕಾಗಿಲ್ಲ ? ಇನ್ನೂ ಕೆಲವು ಕಡೆ ಕುಡಿವ ನೀರೇ ಸಿಗುತ್ತಿಲ್ಲ. ಜನರಿಂದಲೇ ಆಯ್ಕೆಯಾದ ಪ್ರತಿನಿಧಿಗಳು ಚುನಾವಣೆ ಮುಗಿದ ಬಳಿಕ ಜನರ ಸಂಪರ್ಕದಲ್ಲಿ ಇಲ್ಲ. ವಿಧಾನ ಸಭೆ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಬಳಿಕ ಈಗ ಕ್ರಿಯಾಯೋಜನೆ ಬಿಡುಗಡೆ ಮಾಡಿದ ಔಚಿತ್ಯವೇನು ? ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಕೆಯೇ ? ಅಥವಾ ಬೆಂಗಳೂರಿಗರೇ ನೀವು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸದೇ ಹೋದರೆ ಬೆಂಗಳೂರಿನ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಪರೋಕ್ಷ ಎಚ್ಚರಿಕೆಯೇ ? ಏನೇ ಆದರೂ ಈ ಕ್ರಿಯಾ ಯೋಜನೆ ಕಾಗದದಲ್ಲಿ ಉಳಿಯದೇ ಕಾರ್ಯಗತವಾದರೆ ಸಾಕಲ್ಲವೇ ? ೨೦೧೩ರಲ್ಲಿ ಬೆಂಗಳೂರು ಹೇಗಿರತ್ತೋ ?

Published in:  on April 21, 2009 at 12:48 pm Leave a Comment
Tags: , , , ,

ರಿಸ್ಯಾಟ್‌ ೨ – ಇಸ್ರೋ ವಿಜ್ಞಾನಿಗಳ ಸಾಧನೆ

ISAT 2 onthe pad courtesy- ISRO

ISAT 2 onthe pad courtesy- ISRO

ದೂರಸಂವೇದಿ ಉಪಗ್ರಹಗಳ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಿಸ್ಯಾಟ್ -೨ ಮತ್ತು ಅನುಸ್ಯಾಟ್ ಉಪಗ್ರಹಗಳೇ ಈ ಹೆಮ್ಮೆಗೆ ಕಾರಣ. ರಿಸ್ಯಾಟ್ -೨ ಉಪಗ್ರಹ ಭಾರತೀಯ ವಿಜ್ಞಾನಿಗಳ ಹೆಮ್ಮೆಯ ಕಿರೀಟಕ್ಕೊಂದು ಗರಿ. ಈ ಉಪಗ್ರಹ ಇಂದು(೨೦೦೯ ಏಪ್ರಿಲ್ ೨೦) ಬೆಳಗ್ಗೆ ೬.೪೫ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣಗೊಂಡಿದೆ.  ಇಸ್ರೋದ ಸತೀಶ್ ಧವನ್ ಉಪಗ್ರಹ ಕೇಂದ್ರ ಈ ಮಹತ್ವದ ಘಟನೆಗೆ ಸಾಕ್ಷಿಯಾಗಿದೆ. 
ಉಪಗ್ರಹ ಉಡಾವಣೆಗೆ ಬಳಸಿದ ಉಡ್ಡಯನ ವಾಹನ ಪಿಎಸ್‌ಎಲ್‌ವಿ ಸಿ೧೨. ಇದರ ಉದ್ದ ೪೪ ಮೀಟರ್. ೪೮ ಗಂಟೆಗಳ ನಿರೀಕ್ಷಣೆ ಬಳಿಕ ಇಂದು ಬೆಳಗ್ಗೆ ಈ ಉಪಗ್ರಹವನ್ನು ಕಕ್ಷೆ ಸೇರಿಸಲಾಗಿದೆ. ಉಡಾವಣೆ ಸಂದರ್ಭದಲ್ಲಿ ಈ ವಾಹನದ ಒಟ್ಟು ತೂಕ ೨೩೦ ಟನ್ ಕಂಡು ಬಂದಿತ್ತು. ಪಿಎಸ್‌ಎಲ್‌ವಿ ಸರಣಿಯ ೧೫ನೇ ಉಡಾವಣಾ ವಾಹನ ಇದಾಗಿತ್ತು. ೧೯೯೩ರಿಂದ ಇಲ್ಲಿ ತನಕ ಈ ಉಡಾವಣಾ ವಾಹನದ ಮೂಲಕ ಇದುವರೆಗೆ ಒಟ್ಟು ೩೦ ಉಪಗ್ರಹಗಳನ್ನು ಉಡಾಯಿಸಿದೆ. ಇದರಲ್ಲಿ ೧೪ ಭಾರತಕ್ಕಾಗಿ ಮತ್ತು ೧೬ ಉಪಗ್ರಹ ವಿದೇಶಗಳಿಗಾಗಿ ಉಡಾಯಿಸಲಾಗಿದೆ.

ರಿಸ್ಯಾಟ್ ಬಗ್ಗೆ ಒಂದಿಷ್ಟು ಮಾಹಿತಿಗಳು

ರಿಸ್ಯಾಟ್ ಅಂದ್ರೆ ರಾಡಾರ್ ಇಮೇಜಿಂಗ್ ಸ್ಯಾಟಲೈಟ್. ರಿಸ್ಯಾಟ್ ೧ ಉಪಗ್ರಹ ಸಿದ್ಧಗೊಳ್ಳುತ್ತಿದೆ. ಈ ಉಪಗ್ರಹವನ್ನು ಕೃಷಿ ಕ್ಷೇತ್ರಕ್ಕೆ ನೆರವಾಗುವಂತೆ ರೂಪಿಸಲಾಗಿತ್ತು. ಮುಂಗಾರು ಹಂಗಾಮಿನ ವಿವರ, ಮುಂಗಾರು ಮಳೆ ಮೊದಲಾದ ವಿವರಗಳನ್ನು ಈ ಉಪಗ್ರಹದ ಮೂಲಕ ಪಡೆಯಬಹುದು.  ಇದು ಭಾರತ ಮಾತ್ರವಲ್ಲದೇ ಪಾಕಿಸ್ಥಾನಕ್ಕೂ ಸಹಕಾರಿಯಾಗಲಿದೆ. ಸಿ- ಬ್ಯಾಂಡ್ ಫ್ರೀಕ್ವೆನ್ಸಿ(೫.೩೫ ಘಃಞ) ನಲ್ಲಿದ್ದು, ಸೂರ್ಯನಿಗೆ ಸಮಾನಂತರ ಕಕ್ಷೆಯಲ್ಲಿ ೬೦೮ ಕಿಮೀ ಆಲ್ಟಿಟ್ಯೂಡ್‌ನಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ಆದರೆ ಮುಂಬಯಿ ತಾಜ್ ದಾಳಿ ಬಳಿಕ ಈ ಉಪಗ್ರಹ ತಯಾರಿ ವಿಳಂಬವಾಗಿದೆ. ಅದಕ್ಕೆ ಕಾರಣ ರಿಸ್ಯಾಟ್ ೨ರ ತಯಾರಿಯ ರೂಪುರೇಷೆ ಸಿದ್ಧವಾದುದು. ರಿಸ್ಯಾಟ್ ೧ ಉಪಗ್ರಹವನ್ನು ಇಸ್ರೋ ಈ ವರ್ಷ ಅಂತ್ಯದೊಳಗೆ ಉಡಾಯಿಸಲಿದೆ.
ರಿಸ್ಯಾಟ್ ೨ನ್ನು ಸರ್ವಋತು ಉಪಗ್ರಹ ಎಂದೂ ಹೇಳಬಹುದು. ಯಾವುದೇ ಪ್ರತಿಕೂಲ ಹವಮಾನವಿದ್ದರೂ ಭೂಮಿಯ ಚಿತ್ರವನ್ನು ತೆಗೆಯುವ ಸಾಮರ್ಥ್ಯ  ಹೊಂದಿದೆ. ಪ್ರಕೃತಿ ವಿಕೋಪ ಎದುರಿಸಲು ಇಸ್ರೋಗೆ ಈ ಉಪಗ್ರಹ ಸಹಕಾರಿಯಾಗಲಿದೆ. ಇದರ ಜೊತೆಯಲ್ಲಿ ಬೇಹುಗಾರಿಕೆ ನಡೆಸಲೂ ಈ ಉಪಗ್ರಹ ಬಳಕೆಯಾಗಲಿದೆ. ಈ ಎರಡೂ ಉಪಗ್ರಹಗಳಲ್ಲಿ ಬಳಕೆಯಾಗಿರುವ ಛಾಯಾಚಿತ್ರ ತೆಗೆಯುವ  ಉಪಕರಣದ ಸಾಮರ್ಥ್ಯ ಒಂದೇ ಆಗಿದೆ. ಅದು ಐದು ವಿಭಿನ್ನ ಮಾದರಿಗಳಲ್ಲಿ ಕೆಲಸ ಮಾಡಲಿದೆ. ೫೦ ಮೀ ಕೋರ್ಸ್ ರೆಸೆಲ್ಯುಷನ್, ೨೪೦ ಕಿಮೀ ವ್ಯಾಪ್ತಿಯಲ್ಲಿ ಅಗಲ, ೧೦ ಕಿಮೀ ವ್ಯಾಪ್ತಿಯ ಸಂಕುಚಿತ ಮತ್ತು ೨ ಮೀಟರ್ ಹೈ ರೆಸೊಲ್ಯುಷನ್‌ನಲ್ಲಿ ಛಾಯಾಚಿತ್ರಗಳನ್ನು ತೆಗೆಯಲಿದೆ. ಈ ಉಪಗ್ರಹದ ತೂಕ ೩೦೦ ಕಿಲೋ. ಸ್ವದೇಶಿ ನಿರ್ಮಿತ ಉಪಗ್ರಹ ಇದಾಗಿದ್ದು,  ಇಸ್ರೇಲ್ ಈ ಉಪಗ್ರಹಕ್ಕಾಗಿ ಸಿಂಥೆಟಿಕ್ ಅಪರ್ಚರ್ ರ್‍ಯಾಡಾರ್‌ನ್ನು ಒದಗಿಸಿದೆ.

ಅನುಸ್ಯಾಟ್

ಹೆಸರೇ ಹೇಳುವಂತೆ ಇದು ಅನ್ನಾ ವಿಶ್ವವಿದ್ಯಾನಿಲಯದ ಉಪಗ್ರಹ. ಇಸ್ರೋದ ಮಾರ್ಗದರ್ಶನದಲ್ಲಿ ಈ ಅನುಸ್ಯಾಟ್ ಅನ್ನು ತಯಾರಿಸಲಾಗಿದೆ. ಇದರ ತೂಕ ೪೦ ಕಿಲೋ. ಹವ್ಯಾಸಿ ಸಂವಹನಕ್ಕಾಗಿ ಈ ಉಪಗ್ರಹ ಬಳಕೆಯಾಗಲಿದೆ. ಇದೇ ಮೊದಲ ಬಾರಿಗೆ ವಿಶ್ವ ವಿದ್ಯಾಲಯವೊಂದು ಭಾರತದಲ್ಲಿ ಉಪಗ್ರಹ ಸಿದ್ಧಗೊಳಿಸಿ ಇತಿಹಾಸ ನಿರ್ಮಿಸಿದೆ. ಚೆನ್ನೈನ ಮದ್ರಾಸ್ ಇನ್ಸಿಟ್ಯೂಟಾಫ್ ಟೆಕ್ನಾಲಜಿ, ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಪುಣೆ ವಿ.ವಿ. ಈ ಉಪಗ್ರಹದ ಬಳಕೆದಾರರು.
ಈ ಮಿನಿಉಪಗ್ರಹ ಸಂಗ್ರಹಿಸು ಮತ್ತು ಮುಂದಕ್ಕೆ ಕಳುಹಿಸುವಂತಹ ಪ್ಲೇಬೋರ್ಡ್ ಹೊಂದಿದೆ. ಇದರ ಸೆಕಂಡರಿ ಪ್ಲೇಬೋರ್ಡ್ ಮೈಕ್ರೋ ಎಲೆಕ್ಟ್ರೋ ಮೆಕಾನಿಕಲ್ ವ್ಯವಸ್ಥೆಯನ್ನು ಹೊಂದಿದೆ. ಈ ವ್ಯವಸ್ಥೆ ಮ್ಯಾಗ್ನೆಟೋಮೀಟರ್ ಮತ್ತು ಉಪಗ್ರಹದ ಉಪಸ್ಥಿತಿ ಸರಿಹೊಂದಿಸುವುದಾಗಿದೆ. ಪ್ರೈಮರಿ ಪ್ಲೇಬೋರ್ಡ್ ಮಾಹಿತಿಗಳನ್ನು ಸಂಗ್ರಹಿಸಿ ಟ್ರಾನ್ಸ್‌ಮೀಟರ್ ಮೂಲಕ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ.

೧೨೦ನೇ ಬರ್ತ್‌‌ಡೇ ದಿನ ಮರೆಯೋದುಂಟೆ ಆತನ್ನ..!

chaplin1ಐದು ಐದೂವರೆ ಅಡಿ ಉದ್ದದ ಶರೀರ. ಟೂತ್ ಬ್ರಷ್ ಮಾದರಿಯ ಮೀಸೆ. ದೊಗಲೆ ಕೋಟು, ಪ್ಯಾಂಟ್, ತಲೆಗೊಂದು ಟೋಪಿ, ಕೈಲೊಂದು ಕೋಲು. ಈ ರೀತಿ ಶರೀರ ಪ್ರಕೃತಿಯನ್ನು ವರ್ಣಿಸಿದರೆ ಸಾಕಲ್ವೇ ? ವ್ಯಕ್ತಿ ಯಾರು ಅಂತ ಹೇಳೋಕೆ ? ಯಸ್.. ಈ ವ್ಯಕ್ತಿ ಚಾಪ್ಲಿನ್ ಎಂದೇ ಖ್ಯಾತ.

ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್ ಎಂಬುದು ಈತನ ನಿಜ ನಾಮಧೇಯ.ಹುಟ್ಟಿದ್ದು ೧೬ ಏಪ್ರಿಲ್ ೧೮೮೯ರಲ್ಲಿ.  ಈತನ ಪ್ರತಿಭೆ ಅನಾವರಣಗೊಂಡಿದ್ದು ಒಂದು ಮನಕಲಕುವ ಸನ್ನಿವೇಶದಲ್ಲಿ. ೧೮೯೪ನೇ ಇಸವಿ ಅದು. ಚಾಪ್ಲಿನ್ ತಾಯಿ ಹೆನ್ನಾ ಸಂಗೀತಗಾರ್ತಿ. ಮಕ್ಕಳ ಪೋಷಣೆಗಾಗಿ ಆಲ್ಡರ್‌ಶಾಟ್‌ನಲ್ಲಿ ಹಾಡುಹೇಳುತ್ತಿದ್ದಳು. ಕಾರ್ಯಕ್ರಮವೊಂದರಲ್ಲಿ ಹೆನ್ನಾರ ಸ್ವರ ಇಂಗಿಹೋಗಿತ್ತು. ಆಗ ಬಾಲಕ ಚಾಪ್ಲಿನ್ ತಾಯಿಯ ವಿರೋಧದ ನಡುವೆಯೂ ವೇದಿಕೆ ಏರಿದ. ಆ ಕಾಲದ ಪ್ರಸಿದ್ಧ ಹಾಡು ಜಾಕ್ ಜೋನ್ಸ್ ಎಂಬ ಹಾಡನ್ನು ಹಾಡುತ್ತಾ ಕುಣಿದ. ವೀಕ್ಷಕರ ಮೆಚ್ಚುಗೆಯನ್ನೂ ಗಳಿಸಿದ.

ಹೀಗೆ ರಂಗ ಪ್ರವೇಶಿಸಿದ ಚಾಪ್ಲಿನ್ ವೃತ್ತಿ ಜೀವನದಲ್ಲಿ ಕೀರ್ತಿ ಶಿಖರವನ್ನೇ ಕಂಡ. ಅದೂ ಸ್ವಂತ ಪ್ರಯತ್ನದಿಂದ. ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಒತ್ತಿದ ಚಾಪ್ಲಿನ್ ತನ್ನ ಇಮೇಜ್ ಕ್ರಿಯೇಟ್ ಮಾಡಿದ್ದೇ ಒಂದು ರೋಚಕ ಕ್ಷಣದಲ್ಲಿ. ೧೯೧೪ನೇ ಇಸವಿ ಅದು. ಕಿಡ್ ಅಟೋ ರೇಸಸ್ ಅಟ್ ವೆನಿಸ್ ಫೆಬ್ರವರಿ ಏಳರಂದು ತೆರೆ ಕಂಡರೆ, ಮಾಬೆಲ್ಸ್ ಸ್ಟ್ರೇಂಜ್ ಪ್ರೆಡಿಕಮೆಂಟ್ ಫೆಬ್ರವರಿ ೯ ರಂದು ತೆರೆ ಕಾಣುತ್ತದೆ. ತಾಂತ್ರಿಕವಾಗಿ ಮಾಬೆಲ್ಸ್ ಸ್ಟ್ರೇಂಜ್ ಪ್ರೆಡಿಕಮೆಂಟ್ ಚಾಪ್ಲಿನ್‌ನ ಎರಡನೇ ಚಿತ್ರ.

ಈ ಚಿತ್ರದ ಪಾತ್ರವೊಂದಕ್ಕಾಗಿ ಆತ ವಸ್ತ್ರಾಲಂಕಾರ ಆಯ್ಕೆ ಮಾಡಬೇಕಿತ್ತು. ಪತ್ರಕರ್ತನ ಡ್ರೆಸ್ ಹಾಕೋದು ಚಾಪ್ಲಿನ್‌ಗೆ ಇಷ್ಟವಿರಲಿಲ್ಲ. ವಯಸ್ಸಾದವನ ರೀತಿ ಕಾಣಿಸಿಕೊಳ್ಳಬೇಕೋ ಇನ್ನೂ ಯುವಕನ ಹಾಗೆ ಕಾಣಿಸಿಕೊಳ್ಳಬೇಕೋ ಎಂಬ ಗೊಂದಲ ಕಾಡಿತ್ತು ಚಾಪ್ಲಿನ್‌ಗೆ. ಅದೇ ಗೊಂದಲದಲ್ಲಿ ವಾರ್ಡ್ ರೋಬ್‌ನಿಂದ ಕೈಗೆ ಸಿಕ್ಕಿದ ಪ್ಯಾಂಟ್ ಶರ್ಟ್ ಹಾಕಿ, ಮೀಸೆಯನ್ನೂ ವಿಶಿಷ್ಟವಾಗಿ ಕಟ್ ಮಾಡಿಕೊಂಡ. ಬಳಿಕ ವಾಕ್ ಸ್ಟಿಕ್ ಒಂದನ್ನು ಹಿಡಿದುಕೊಂಡು ಈ ಎರಡು ಸಿನಿಮಾದಲ್ಲಿ ಅಭಿನಯಿಸಿದ. ಇದೇ ವಿಶಿಷ್ಟ ವ್ಯಕ್ತಿತ್ವದಲ್ಲಿ ಎಲ್ಲ ಸಿನಿಮಾದಲ್ಲೂ ಕಾಣಿಸಿಕೊಂಡು ಅದುವೇ ಚಾಪ್ಲಿನ್ ಇಮೇಜ್ ಆಗಿ ಉಳಿಯಿತು.

ಹೀಗೆ ನಿರಂತರ ಮೂಕಿ ಚಿತ್ರಗಳನ್ನು ಕೊಡುತ್ತಲೇ ಬಂದ ಚಾಪ್ಲಿನ್ ವಾಕ್‌ಚಿತ್ರಗಳು ಬಂದಾಗ ಮತ್ತೆ ಸಮಸ್ಯೆಗೆ ಸಿಲುಕಿದ. ದಾಂಪತ್ಯ ಜೀವನವೂ ಸುಖ ಮಯವಾಗಿರಲಿಲ್ಲ. ಏನೇ ಆದರೂ ಛಲದಂಕ ಮಲ್ಲನಂತ ಸಿನಿಮಾ ಕ್ಷೇತ್ರದಲ್ಲಿ ಯಾರೂ ಅಳಿಸಲಾಗದೇ ಇರುವಂತಹ ಚರಿತ್ರೆ ನಿರ್ಮಿಸಿದ. ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥ ನಾಮವಾದ. ನಿಜವಾಗಿಯೂ ಇಂಥವರಲ್ಲವೇ ನಮ್ಮ ಸಾಧನೆಯ ಬದುಕಿಗೆ ಆದರ್ಶವಾಗಬೇಕಾದುದು ?

ಲೀಡ್ ಇಂಡಿಯಾನೇ ಓಕೆ ಬ್ಲೀಡ್ ಇಂಡಿಯಾ ಯಾಕೆ ?

 

bleedindia.com

bleedindia.com

ಮತದಾನ ಮಾಡದಿದ್ದರೆ ಏನಾಗುತ್ತದೆ ? ಅಯೋಗ್ಯರು ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ ಅಷ್ಟೇ.. ಹಾಗಾಗಬಾರದು ಅಂತ ಇಂಟರ್‌ನೆಟ್‌ನಲ್ಲಿ ದೊಡ್ಡ ಪ್ರಚಾರವೇ ನಡೆದಿದೆ. ವೋಟ್ ಮಾಡಿ ಹೆಮ್ಮೆಯ ಭಾರತೀಯರಾಗಿ ಎಂಬುದೇ ಇಲ್ಲಿನ ಮುಖ್ಯ ಸಂದೇಶ…

ಇಲ್ಲಿ ನನ್ ಗಮನ ಸೆಳೆದುದು ಒಂದೇ ಒಂದು ಅಂತರ್ಜಾಲ ತಾಣ. ಅದರ ಜಾಹೀರಾತು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ನೀವು ಕೂಡಾ ನೋಡಿರಬಹುದು.
ಈ ಅಂತರ್ಜಾಲ ತಾಣದ ಹೆಸರು bleedindia.com ಅಂತ. ಟೈಮ್ಸ್ ಆಫ್ ಇಂಡಿಯಾ ಎಂಬ ಪತ್ರಿಕೆ ಯುವ ನಾಯಕರನ್ನು ಆಯ್ಕೆ ಮಾಡೋದಕ್ಕಾಗಿ ಲೀಡ್ ಇಂಡಿಯಾ ಅಂತ ಒಂದು ಆಂದೋಲನ ನಡೆಸಿತ್ತು. ಅದರ ಅಣಕು ಇದಾಗಿರಬಹುದೇ ಎಂಬ ಸಂಶಯದಿಂದ ತಾಣದೊಳಕ್ಕೆ ಇಣುಕಿ ನೋಡಿದೆ.

ಅಂತರ್ಜಾಲ ತಾಣದಲ್ಲಿ ಜಾಲಾಡಿದರೆ ಕಣ್ಣಿಗೆ ಬೀಳತ್ತೆ ಈ ಬ್ಲೀಡ್ ಇಂಡಿಯಾ ಕ್ಯಾಂಪೇನ್ ೨೦೦೯. ತಕ್ಷಣವೇ ಗಮನಸೆಳೆಯುತ್ತದೆ ಇದರ ಕಿಕ್ಕರ್ ಲೈನ್.. ಅಲ್ಲೇನಿದೆ ಗೊತ್ತೆ? ನೋ ಟೆನ್ಶನ್. ವೈ ವೋಟ್ ಇನ್ ಎಲೆಕ್ಷನ್ ? ಹೀಗೊಂದು ಪ್ರಶ್ನೆ. ಒಟ್ಟಾರೆ ನೆಗೆಟಿವ್ ಮನೋಭಾವನೆ ಮೂಲಕವೇ ಪ್ರಜ್ಞೆ ಮೂಡಿಸುವ ಪ್ರಯತ್ನ ಇದು. ಪ್ರಜ್ಞಾವಂತ ಮತದಾರ ವೋಟ್ ಮಾಡದೇ ಹೋದರೆ ಏನಾಗಬಹುದು ಎಂಬುದನ್ನು ಈ ಅಂತರ್ಜಾಲ ತಾಣ ಹೇಳತ್ತೆ..

ಒಮ್ಮೆ ಇದರೊಳಕ್ಕೆ ಇಣುಕಿದರೆ ಅಲ್ಲಿ ನಿಮಗೆ ಕಾಣಿಸುವುದೆಲ್ಲವೂ ಬರೇ ವ್ಯಂಗ್ಯ. ಈ ಅಂತರ್ಜಾಲದ ನಾಯಕ ಪಪ್ಪುರಾಜ್. ಬ್ಲೀಡ್ ಇಂಡಿಯಾ ಎಂಬ ಪಕ್ಷದ ಅಭ್ಯರ್ಥಿ ಆತ ಎಂದು ಬಿಂಬಿಸಲಾಗಿದೆ. ಸ್ವತಂತ್ರ ಪಡೆದು ಆರು ದಶಕವಾಗಿದೆ. ಕಾಂಗ್ರೆಸ್ ಸುಮಾರು ಐದು ದಶಕಗಳ ಕಾಲ ಆಡಳಿತ ನಡೆಸಿದೆ. ಬಿಜೆಪಿ ಕೂಡಾ ಐದು ವರ್ಷ ಎನ್‌ಡಿಎ ಮೈತ್ರಿ ಕೂಟದಡಿ ಅಧಿಕಾರದಲ್ಲಿತ್ತು. ಈಗ ಮತ್ತೆ ಲೋಕಸಭೆ ಚುನಾವಣೆ ಬಂದಿದೆ. ಆದರೂ ರಾಜಕೀಯ ಪಕ್ಷಗಳು ಇನ್ನೂ ಕುಡಿವ ನೀರು, ವಿದ್ಯುತ್, ರಸ್ತೆ ಮೊದಲಾದ ಪ್ರಾಥಮಿಕ ಬೇಡಿಕೆಗಳನ್ನೇ ಪ್ರಣಾಳಿಕೆಯಲ್ಲಿ ಘೋಷಿಸಿ ಜನರ ಮುಂದೆ ಮತಯಾಚಿಸುತ್ತಿವೆ. ಇದಕ್ಕೆ ಕಾರಣ ಏನು ಎಂಬ ಸೂಕ್ಷ್ಮ ವಿಚಾರವನ್ನು ತರಹೇವಾರಿ ಲೇವಡಿ ಮಾಡಲಾಗಿದೆ ಈ ತಾಣದಲ್ಲಿ..

ಇಂಟರ್‌ನೆಟ್‌ನಲ್ಲಿ ಗೇಮ್ ಆಡೋದು ಅಂದ್ರೆ ಒಂಥರಾ ಮಜಾ ಅಲ್ವಾ ? ಅದಕ್ಕಾಗಿ ಆಟ ಆಡೋಕೆ ಒಂದಿಷ್ಟು ಗೇಮ್ಸ್ ಕೂಡಾ ಅಲ್ಲಿವೆ.. ಹಾರ ಹಾಕಿಸ್ಕೊಳ್ಳೋದು… ಟೊಮೆಟೋ ಎಸೆತದಿಂದ ತಪ್ಪಿಸ್‌ಕೊಂಡ್ರೆ ಹಾರ ಉಳ್ಕೊಳ್ಳತ್ತೆ.. ಹಾಗೆಯೆ ಕುರ್ಚಿ ಆಟ ಕೂಡಾ ಇದೆ. ಇನ್ನು ನೆಟ್‌ಶಾಪಿಂಗ್ ಅಂತ ಬೇರೆ ಇದೆ. ಹಾಗೆಯೇ ರಿಂಗ್ ಟೋನ್ಸ್, ಕಾಲರ್ ಟೋನ್ಸ್ ಕೂಡಾ ಇದಾವೆ.

ಇವಂತೂ ನಿಜಕ್ಕೂ ಫನ್ನಿ.. ರಿಂಗ್ ಟೋನ್ ಹಾಕಿದರೆ… ನೇತಾಜಿ ಕೀ ಅಂದ್ರೆ ಎಮ್ಮೆ ಕೂಗತ್ತೆ.. ಅಚ್ಚರಿ ಬೇಡ. ಯಾಕೆಂದ್ರೆ ಇದು ಮತದಾರರಲ್ಲಿ ಜಾಗೃತಿ ಮೂಡಿಸುವ ಹೊಸ ವಿಧಾನ. ಒಟ್ಟಿನಲ್ಲಿ ಎಲ್ಲ ಅಂತರ್ಜಾಲ ತಾಣಗಳೂ ಸಾರುವ ಸಂದೇಶ ಒಂದೇ… ನಮ್ಮ ಉತ್ತಮ ಭವಿಷ್ಯಕ್ಕಾಗಿ ಮತದಾನದ ಹಕ್ಕು ಚಲಾಯಿಸಲೇ ಬೇಕು. ಕ್ರಿಮಿನಲ್ ದಾಖಲೆ ಹೊಂದಿದವರನ್ನು ದೂರ ಇರಿಸಬೇಕು. ಪ್ರಜ್ಞಾವಂತ ಯುವಕರನ್ನು ಆಯ್ಕೆ ಮಾಡಬೇಕು. ಅದು ಸಾಧ್ಯವಾಗಬೇಕೆಂದರೆ ಎಲ್ಲರೂ ಮತ ಚಲಾಯಿಸಲೇ ಬೇಕು.

ಸ್ಟಾರ್ ಕ್ಯಾಂಪೇನ್ ಮೋಡಿ ಅಂದ್ರೆ ಇದೇನಾ…?

ಚುನಾವಣೆ ಬಂದರೆ ಸಾಕು ರಾಜಕೀಯ ಪಕ್ಷಗಳ ಪ್ರಚಾರ ವೈವಿಧ್ಯಮಯವಾಗಿರುತ್ತದೆ. ಪ್ರಚಾರಕ್ಕೆ ಮೆರುಗು ನೀಡಬೇಕಾದರೆ ಅಲ್ಲಿ ಸ್ಟಾರ್ ಕ್ಯಾಂಪೇನರ್‌ಗಳು ಇರಬೇಕು. ಏನೇ ಇರಲಿ ಮತದಾರರ ಒಲವು ತಮ್ಮ ಕಡೆಗೆ ಇರಬೇಕು. ಇದು ರಾಜಕೀಯ ಮುಖಂಡರ ವನ್ ಪಾಯಿಂಟ್ ಅಜೆಂಡಾ. ಈಗ ಮತ್ತೆ ಬಂದಿದೆ ಲೋಕಸಭೆ ಚುನಾವಣೆ. ಎಲ್ಲ ಪಕ್ಷಗಳು ತಮ್ಮ ಪ್ರಚಾರ ಕಾರ್ಯ ಪ್ರಾರಂಭಿಸಿವೆ. ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆಯಾಗುತ್ತಿದೆ.
ಇನ್ನು ಪ್ರಚಾರ ಎಂದ ಕೂಡಲೇ ಅಲ್ಲಿ ಸ್ಟಾರ್ ಕ್ಯಾಂಪೇನರ್ ಅಥವಾ ತಾರಾ ಪ್ರಚಾರಕರು ಇರಬೇಕಲ್ವೇ ? ಆಯಾ ಪಕ್ಷಗಳು ತಮ್ಮ ಸ್ಟಾರ್ ಕ್ಯಾಂಪೇನರ್ ಯಾರು ಎಂಬುದನ್ನು ಗುರುತಿಸತೊಡಗಿವೆ. ಅದರಲ್ಲೂ ಬಿಜೆಪಿಯಂತೂ ಎಲ್ಲ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆಯೇ ಇದೆ.

ಸ್ಟಾರ್ ಕ್ಯಾಂಪೇನರ್ ಅಂದ್ರೆ ಏನು ?

sruthiಸ್ಟಾರ್ ಕ್ಯಾಂಪೇನರ್ ಅಂದ ಕೂಡಲೇ ಜನಸಾಮಾನ್ಯರ ಮನಸ್ಸಿನಲ್ಲಿ ಸಿನಿಮಾ ತಾರೆಯರೇ ರಾರಾಜಿಸುತ್ತಾರೆ. ರಾಜಕೀಯ ಪಕ್ಷಗಳೂ ಹಾಗೆಯೇ govinda1ಬಿಂಬಿಸುತ್ತಾ ಬಂದಿವೆ. ಯಾವುದೇ ಚುನಾವಣೆ ಇರಲಿ ಸಿನಿಮಾ ತಾರೆಯರು ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ನಡೆಸುವುದು ಸಾಮಾನ್ಯ. ಬಿಜೆಪಿ ಪರವಾಗಿ ಹೇಮಮಾಲಿನಿ, ಶತ್ರುಘ್ನ ಸಿನ್ಹಾ, ಕಾಂಗ್ರೆಸ್ ಪರವಾಗಿ ಗೋವಿಂದಾ, ನಗ್ಮಾ ಮತ್ತಿತರರು ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕರ್ನಾಟಕದತ್ತ ಕಣ್ಣು ಹಾಯಿಸಿದರೆ ಜಗ್ಗೇಶ್, ಸಾಯಿಕುಮಾರ್, ಶ್ರುತಿ ಬಿಜೆಪಿ ಪರವಾಗಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ನಿಜವಾಗಿಯೂ ಸ್ಟಾರ್ ಕ್ಯಾಂಪೇನರ್ ಅಂದರೆ ಕೇವಲ ಸಿನಿಮಾ ತಾರೆಯರು ಮಾತ್ರ ಅಂದ್‌ಕೊಂಡ್ರೆ ತಪ್ಪಾಗುತ್ತದೆ. 
ರಾಜ್ಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಎಲ್.ಕೆ.ಅಡ್ವಾಣಿ, ರಾಜ್‌ನಾಥ್ ಸಿಂಗ್, ಸುಷ್ಮಾ ಸ್ವರಾಜ್, ಹೇಮಮಾಲಿನಿ, ಅರುಣ್‌ಜೇಟ್ಲಿ, ವೆಂಕಯ್ಯನಾಯ್ಡು, ಅನಂತ್‌ಕುಮಾರ್, ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಡಾ.ವಿ.ಎಸ್.ಆಚಾರ್ಯ, ನವರಸ ನಾಯಕ ಜಗ್ಗೇಶ್, ಡಯಲಾಗ್ ಕಿಂಗ್ ಸಾಯಿಕುಮಾರ್, ಕಣ್ಣೀರ ತಾರೆ ಶ್ರುತಿ ಸೇರಿದಂತೆ ೪೦ ಮುಖಂಡರನ್ನು ಬಿಜೆಪಿ ತಾರಾ ಪ್ರಚಾರಕರಾಗಿ ಗುರುತಿಸಿದೆ.
ಕಾಂಗ್ರೆಸ್ ತಾರಾಪ್ರಚಾರಕರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಸೋನಿಯಾಗಾಂಧಿ, ಮನಮೋಹನ್‌ಸಿಂಗ್ ಸೇರಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ, ಕಾರ್ಯಾಧ್ಯಕ್ಷರು ಸೇರಿದಂತೆ ಕೆಲವರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಜೆಡಿಎಸ್ ಕೂಡಾ ತನ್ನ ತಾರಾ ಪ್ರಚಾರಕರ ಹೆಸರು ಅಂತಿಮಗೊಳಿಸಿಲ್ಲ. ದೇವೇಗೌಡರಾದಿಯಾಗಿ ಅನಿತಾಕುಮಾರಸ್ವಾಮಿ ಮತ್ತು ಇತರೆ ಕೆಲವು ಮುಖಂಡರಿಗೆ ತಾರಾ ಮೌಲ್ಯ ಸಿಗಲಿದೆ ಎನ್ನುತ್ತವೆ ಪಕ್ಷದ ಮೂಲಗಳು.

ಆಯೋಗ ಏನ್ ಹೇಳುತ್ತೆ ?

ಚುನಾವಣಾ ಆಯೋಗ ಇದಕ್ಕೊಂದು ಮಾರ್ಗದರ್ಶನ ನೀತಿ ರೂಪಿಸಿದೆ. ಆಯಾ ರಾಜ್ಯದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ ೪೦ ನಾಯಕರನ್ನು ಆಯಾ ಪಕ್ಷಗಳು ಗುರುತಿಸಬಹುದು. ಅವರ ಹೆಸರನ್ನು ಆಯೋಗಕ್ಕೆ ಕಳುಹಿಸಿಕೊಟ್ಟಲ್ಲಿ ಅವರಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುತ್ತದೆ. ಅವರು ಅಭ್ಯರ್ಥಿಗಳಿಗೆ ಎಂದು ನಿಗದಿಪಡಿಸಿದ ವಾಹನದಲ್ಲೇ ಹೋಗಬೇಕು ಎಂಬ ನಿಯಮವಿಲ್ಲ.
ಸ್ಟಾರ್ ಕ್ಯಾಂಪೇನರ್‌ಗಳು ಹೆಸರೇ ಹೇಳುವಂತೆ ಅವರು ತಾರಾಮೌಲ್ಯ ಹೊಂದಿರುವ ಪ್ರಚಾರಕರು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತಾರಾ ಪ್ರಚಾರಕರನ್ನು ಹೊಂದಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಅಂದರೆ ಪ್ರತಿ ರಾಜ್ಯದಲ್ಲೂ ೪೦ ಜನ ಪ್ರಚಾರಕರನ್ನು ಹೊಂದಬಹುದು. ಇವರ ಖರ್ಚು ವೆಚ್ಚ ಎಲ್ಲವೂ ಪಕ್ಷದ ಖಜಾನೆಗೆ ಸಂಬಂಧಿಸಿದ್ದು. ಇದಕ್ಕೆ ಆಯೋಗ ಯಾವುದೇ ಮಿತಿ ಹಾಕಿಲ್ಲ.
ಸಂಸತ್‌ಕ್ಷೇತ್ರದ ಅಭ್ಯರ್ಥಿ ೨೫ ಲಕ್ಷ ರೂಪಾಯಿ ತನಕ ಚುನಾವಣಾ ವೆಚ್ಚ ಮಾಡಬಹುದು. ಆದರೆ ಈ ತಾರಾ ಪ್ರಚಾರಕರ ಖರ್ಚು ವೆಚ್ಚಗಳು ಅಭ್ಯರ್ಥಿಗೆ ಸೇರುವುದಿಲ್ಲ. ಇವರು ಪ್ರವಾಸ ಖರ್ಚೇ ಕೋಟ್ಯಂತರ ರೂಪಾಯಿಗಳಾಗುತ್ತವೆ. ಹೆಲಿಕ್ಯಾಪ್ಟರ್‌ನಲ್ಲಿ ಪ್ರಯಾಣ ಮಾಡಿದರೆ ಪ್ರತಿ ದಿನಕ್ಕೆ ೭ ರಿಂದ ೮ ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಿದರೆ ಆಯೋಗ ನಿಗದಿ ಪಡಿಸಿದ ವೆಚ್ಚಕ್ಕಿಂತ ಹೆಚ್ಚಾಗುತ್ತದೆ.
ಹೀಗಾಗಿ ಎಲ್ಲ ರಾಜಕೀಯ ಪಕ್ಷದ ಜೊತೆಗೆ ಮಾತುಕತೆ ನಡೆಸಿರುವ ಆಯೋಗ, ತಾರಾ ಪ್ರಚಾರಕರ ಖರ್ಚು ಪಕ್ಷಕ್ಕೆ ಸಂಬಂಧಿಸಿದ್ದು ಎಂಬುದಕ್ಕೆ ಸಮ್ಮತಿ ನೀಡಿದೆ.

ಚಾಪೆ ಕೆಳಗೆ ತೂರಿದರೆ….

ಮಾಧ್ಯಮ ಅಧ್ಯಯನ ಕೇಂದ್ರವೊಂದರ ವರದಿ ಪ್ರಕಾರ ಲೋಕಸಭೆ ಚುನಾವಣೆಗೆ ಈ ಬಾರಿ ಚುನಾವಣಾ ಆಯೋಗ ಮತ್ತು ಸರಕಾರ ಖರ್ಚು ಮಾಡುವ ಹಣ ಬರೋಬ್ಬರಿ ೨ ಸಾವಿರ ಕೋಟಿ ರೂಪಾಯಿ. ಇದರಲ್ಲಿ ಚುನಾವಣಾ ಆಯೋಗ ೧೩೦೦ ಕೋಟಿ ರೂಪಾಯಿ ಖರ್ಚು ಮಾಡಿದರೆ, ಕೇಂದ್ರ ಮತ್ತು ರಾಜ್ಯ ಸರಕಾರ ಅಂದಾಜು ೭೦೦ ಕೋಟಿ ರೂಪಾಯಿ ಖರ್ಚು ಮಾಡಲಿದೆ. ಉಳಿದಂತೆ ವಿವಿಧ ಪಕ್ಷಗಳು ಮತ್ತು ಅಭ್ಯರ್ಥಿಗಳು ಮಾಡುವ ಖರ್ಚು ಎಂಟು ಸಾವಿರ ಕೋಟಿ ರೂಪಾಯಿಗೂ ಹೆಚ್ಚಾಗಲಿದೆ. ಕಳೆದ ಲೋಕ ಸಭೆ ಚುನಾವಣೆಗೆ ೪,೫೦೦ ಕೋಟಿ ರೂಪಾಯಿ ಖರ್ಚಾಗಿತ್ತು.

ಚುನಾವಣಾ ಆಯೋಗದ ಅಂದಾಜು ಖರ್ಚು – ೧೩೦೦ ಕೋಟಿ ರೂ.
ರಾಜ್ಯ ಮತ್ತು ಕೇಂದ್ರ ಸರಕಾರದ ಖರ್ಚು  -  ೭೦೦ ಕೋಟಿ ರೂ.
ವಿವಿಧ ಪಕ್ಷಗಳ ಅಂದಾಜು ಖರ್ಚು     – ೩೦೦೦ ಕೋಟಿ ರೂ.
ಅಭ್ಯರ್ಥಿಗಳ ಅಂದಾಜು ಖರ್ಚು       – ೫೦೦೦ ಕೋಟಿ ರೂ.

ಇದನ್ನೆಲ್ಲಾ ಗಮನಿಸುತ್ತಾ ಹೋದರೆ ಒಂದು ಸತ್ಯ ಬಹಿರಂಗವಾಗುತ್ತದೆ. ಆಯೋಗ ಚಾಪೆ ಕೆಳಗೆ ತೂರಿದರೆ ರಾಜಕೀಯ ಪಕ್ಷಗಳು ರಂಗೋಲಿ ಕೆಳಗೆ ತೂರುತ್ತವೆ. ಚುನಾವಣಾ ಆಯೋಗ ಅಭ್ಯರ್ಥಿಗೆ ಚುನಾವಣಾ ವೆಚ್ಚ ಮಿತಿ ನಿಗದಿಗೊಳಿಸಿದೆ. ಆದರೆ ಪಕ್ಷದ ಖರ್ಚಿಗಲ್ಲ. ಇನ್ನೇನು ಬೇಕು ಹೇಳಿ… 
ಈ ಸಲದ ಲೋಕಸಭೆ ಚುನಾವಣೆ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗಿಂತಲೂ ದುಬಾರಿಯಾಗದೇ ಹೋದೀತೇ ? ಈಗ ಹೇಳಿ ಸ್ಟಾರ್ ಕ್ಯಾಂಪೇನರ್ ಮತ್ತು ಇತರೆ ಸವಲತ್ತುಗಳು ಅಭ್ಯರ್ಥಿಗಳಿಗೆ ವರದಾನವಾಗಿ ಪರಿಣಮಿಸಿಲ್ಲವೇ !

ಈ ಲೆಕ್ಕಾಚಾರಗಳೆಲ್ಲವನ್ನೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಜೊತೆ ಹೋಲಿಸಬೇಡಿ… ಯಾಕೆಂದರೆ ಭಾರತದ ಜನಸಂಖ್ಯೆ ಅಮೆರಿಕಾದ ಜನಸಂಖ್ಯೆಗಿಂತ ಹೆಚ್ಚು ಎಂಬ ಉತ್ತರ ರಾಜಕೀಯ ಮುಖಂಡರದು. ಹೀಗಾದರೆ ಚುನಾವಣೆ ದುಬಾರಿಯಾಗದೇ ಮತ್ತಿನ್ನೇನಾಗಲು ಸಾಧ್ಯ ? ಮಾಧ್ಯಮ ಅಧ್ಯಯನ ಕೇಂದ್ರದ ಅಂದಾಜು ಲೆಕ್ಕಾಚಾರ ಪ್ರಕಾರ ಈ ಚುನಾವಣೆಗೆ ೧೦ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗಲಿದೆ. ಕಾನೂನಿನ ಪರಿಮಿತಿಯಲ್ಲಿ ಅಭ್ಯರ್ಥಿಗಳ ವೆಚ್ಚಕ್ಕೆ ಕಡಿವಾಣ ಹಾಕಿದರೂ ಪಕ್ಷದ ಚುನಾವಣಾ ವೆಚ್ಚಕ್ಕೆ ಕಡಿವಾಣ ಯಾಕಿಲ್ಲ ? ಹೀಗೊಂದು ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ.
—-

ಪ್ರಚಾರ ಗಿಟ್ಟಿಸೋ ಖಯಾಲಿ ನಂಗಿಲ್ಲ…!

anathakumarಲೋಕಸಭೆ ಚುನಾವಣೆ ಘೋಷಣೆ ಆಗಿದೆ. ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಯುಗಾದಿ ಹಬ್ಬ ಆದರೂ ಚುನಾವಣೆ ಕಾವು ಏರುತ್ತಿರುವುದಿರಂದ ರಜೆಯ  ಕನಸು ಕಾಣುವಂತಿಲ್ಲ.  ಯಾಕೆಂದರೆ ಪತ್ರಕರ್ತರ ಹಣೆಬರಹವೇ ಅಷ್ಟು..  ಮನೆ ಮಂದಿ ಜೊತೆ ಹರಟಲು ಸಮಯ ಸಿಗಲ್ಲ ಅನ್ನೋದು ಬಿಟ್ಟರೆ.. ಕೆಲಸದಲ್ಲಿ ಸಿಗೋ ಖುಷಿ … ರಸ ನಿಮಿಷಗಳು ಬೇರೆಲ್ಲಿ ಕಾಣಲು ಸಾಧ್ಯ ! ಅದಕ್ಕೆ ಅನ್ನೋದು ಎಲ್ಲದಕ್ಕೂ ಅದೃಷ್ಟ ಇರಬೇಕು ಎಂದು..

ಆ  ವಿಷಯ ಹಾಗಿರಲಿ.. ಏನು ಹೇಳ ಹೊರಟಿದ್ದೆ ಅಂದರೆ.. ಯುಗಾದಿ ಆದರೂ ಬಿಜೆಪಿ ಆಪರೇಷನ್ ಕಮಲ ನಿಲ್ಲಿಸಿಲ್ಲ.  ಮಲ್ಲೇಶ್ವರಂನ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಘಟನೆ ನಿಮ್ಮ ಜೊತೆ ಹಂಚಿಕೊಳ್ಳದಿದ್ದರೆ ಸಮಾಧಾನ ಆಗಲ್ಲ. 

ಶಾಸಕ ವಿ.ಸೋಮಣ್ಣ ಬಿಜೆಪಿ ಸೇರ್ಪಡೆಯಾಗುತ್ತಾರೆ.. ಇಂದು ನಾಳೆ ಅಲ್ಲಲ್ಲ ಮುಂದಿನ ವಾರ ಹೀಗೇ ದಿನ ದೂಡುವುದೇ ಆಗಿ ಹೋಗಿತ್ತು. ಎಲ್ಲ ಮಾಧ್ಯಮಗಳಲ್ಲೂ ಪದೆ ಪದೇ ಅದೇ ಸುದ್ದಿ… ಕಾರಣ ಬೇರೆ ಹೇಳಬೇಕಿಲ್ಲ. ಹೇಳಿ ಕೇಳಿ ಸೋಮಣ್ಣ  ಬಿಬಿಎಂಪಿಯ ಮೇಯರ್‌ ಆಗಬೇಕು ಎಂದು ಕನಸು ಕಂಡವರು.  ಇಂದು ಅವರ ಇಬ್ಬರು ಸುಪುತ್ರರು ಬಿಜೆಪಿ ಸೇರ್ಪಡೆಯಾಗುವ ಕಾರ್ಯಕ್ರಮ ಇತ್ತು ನೋಡಿ. 

ಹಾಗೆ ಮಾಧ್ಯಮ ಮಿತ್ರರೆಲ್ಲರೂ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಈ ಸಮಾರಂಭಕ್ಕಾಗಿ ಕಾಯುತ್ತಾ ಕುಳಿತಿದ್ದೆವು. ಮಧ್ಯಾಹ್ನ ಒಂದು ಗಂಟೆಯ ಸಮಯ. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಬಿಜೆಪಿಯ ಹಿರಿಯ ಮುಖಂಡ ಅನಂತ್‌ಕುಮಾರ್‍ ಆಗಮನವಾಯಿತು ಅಲ್ಲಿಗೆ.  ಸಾಮಾನ್ಯ ವಾಡಿಕೆಯಂತೆ ಆಂಗ್ಲ ಟಿ.ವಿ.ಯೊಂದರ ರಿಪೋರ್ಟರ್‌ ಅನಂತ್‌ಕುಮಾರ್‍ ಅವರನ್ನು ಮಾತನಾಡಿಸಲು ಮುಂದಾದರು.  ಆ ಕ್ಷಣದಲ್ಲಿ ಅನಂತ್‌ಕುಮಾರ್‍ ಆಡಿದ ಅಣಿಮುತ್ತುಗಳು…

” ಕಾರ್ಯಕ್ರಮ ಮುಗಿದ ಬಳಿಕ ಬೇಕಾದ್ರೆ ಮಾತನಾಡುತ್ತೇನೆ. ಈಗಲೇ ಮಾತನಾಡಲು ಸಾಧ್ಯವಿಲ್ಲ. ನಂಗೆ ಪ್ರಚಾರ ಗಿಟ್ಡಿಸಬೇಕು ಎಂಬ ಖಯಾಲಿ ಇಲ್ಲ.  ನಂಗೆ ರಾಜಕೀಯ ರಂಗದಲ್ಲಿ ೩ ದಶಕದ ಅನುಭವ ಇದೆ. ಹೀಗಾಗಿ ನಾನು ಮಾತನಾಡದೇ ಹೋದರೂ ಹೆಡ್‌ ಲೈನ್ ಆಗ್ತೇನೆ. ಇದಕ್ಕಾಗಿ ನಾನು ಮೊದಲೇ ಮಾದ್ಯಮ ಮಿತ್ರರ ಜೊತೆ ಮಾತನಾಡಬೇಕಾದ ಅಗತ್ಯವೂ ಇಲ್ಲ…!”  ಹೀಗಂತ ಆ ಆಂಗ್ಲ ಟಿವಿ ರಿಪೋರ್ಟರ್‌ಗೆ  ಡಯಲಾಗ್ ಹೊಡೆದು ಹೋದ್ರು ಅನಂತ್‌ಕುಮಾರ್‍.

ಪಾಪ ! ರಿಪೋರ್ಟರ್‌ಗಳ ಕಷ್ಟ  ಅವರಿಗೇನು ಗೊತ್ತಾಗಬೇಕು ? ಅನಂತ್‌ಕುಮಾರ್‍ನ್ನು ಮಾತನಾಡಿಸಿ ಸುದ್ದಿ ಮಾಡಿಕೊಂಡು ಬರಬೇಕು ಅಂತ ಕಚೇರಿಯಿಂದ ಹುಕುಂ ಇರತ್ತೆ. ಒಂದು ಬೈಟ್‌ಗೋಸ್ಕರ  ಗಂಟೆಗಟ್ಟಲೆ ಕಾಯೋದು ಅಂದ್ರೆ ಕಷ್ಟವೇ ಅಲ್ವಾ ?

ಅನಂತ್‌ಕುಮಾರ್‍ ಮಹಡಿ ಮೇಲಿನ ಮೀಡಿಯಾ ಹಾಲ್ ಕಡೆಗೆ ಹೋದರಲ್ಲವೇ ಅಂತ ನಾವೂ ಅತ್ತ ಹೊರಟೆವು.  ಅಲ್ಲಿ  ಹೋಗಿ ನೋಡಿದರೆ ಅನಂತ್‌ಕುಮಾರ್‍ ಕಾರ್ಯಕರ್ತರಿಗೆ ಶುಭಾಶಯ ಕೋರುತ್ತಿದ್ದರು. ಅದನ್ನು ನೋಡುತ್ತಾ ನಾವು ನಮಗೆಂದು ಮೀಸಲಾಗಿದ್ದ ಆಸನಗಳಲ್ಲಿ ಆಸೀನರಾದೆವು.

ಅಷ್ಟರಲ್ಲಿ ಅನಂತ್‌ಕುಮಾರ್‍ ವೇದಿಕೆಯತ್ತ ಹೋಗುತ್ತಿದ್ದಾರೆ ಅಂದುಕೊಂಡೆವು. ಆದರೆ ಅಚಾನಕ್‌ ಆಗಿ ಮಾಧ್ಯಮ ಮಿತ್ರರ ಮಧ್ಯೆ ಆಗಮಿಸಿದರು.  ಆ ಕಡೆ ಈ ಕಡೆ ನೋಡಿದರು.. ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು..  ಏನು ಗೊತ್ತೇ ?

ಯುಗಾದಿ ಸಂದರ್ಭದಲ್ಲಿ ಹೇಳುವ ಶ್ಲೋಕವೊಂದು ಇದೆ. ಅದು ನಿಮಗೆ ಗೊತ್ತೆ ?  ಮುಂಭಾಗದಲ್ಲಿ ಕುಳಿತಿದ್ದ ಕೆಲವು ಮಾಧ್ಯಮ ಸ್ನೇಹಿತರು ಇಲ್ಲ ಹೇಳಿ ಸಾರ್‌ ಅಂದ್ರು.. ಅಷ್ಟೇ ಸಾಕಾಗಿತ್ತು. ಅನಂತ್‌ಕುಮಾರ್‍ ಮೀಡಿಯಾದವರಿಗೂ ಪಾಠ ಹೇಳಲು ಪ್ರಾರಂಭಿಸಿದರು.

ಏನದು.. ಹ್ಞಾಂ..!

 ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ 

ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ

ಇದರ ಅರ್ಥ ಏನು ಗೊತ್ತಾ ? ನೂರು ವರ್ಷ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂದು ಅರ್ಥವಾಯಿತೇ ?

ಅಷ್ಟು ಹೇಳಿದ ಅನಂತ್‌ಕುಮಾರ್‍ ಕೂಡಲೇ ಎಲ್ಲ ಮಾಧ್ಯಮ ಸ್ನೇಹಿತರಿಗೆ ಶುಭಾಶಯ ಕೋರುತ್ತಾ ಬಂದರು. ಇದ್ದಕ್ಕಿದ್ದಂತೆ ಟಿವಿ ಚಾನೆಲ್ ಕೆಮರಾ ಕ್ಕೆ ಕೈ ಹಾಕಿದರು ಅನಂತ್‌ಕುಮಾರ್‍.  ಅರೆ ಇದೇನಿದು ಎಂದು ಕೂಡಲೇ ಸುಮ್ಮನೆ ಕೂತು ನೋಡುತ್ತಿದ್ದ ಟಿ.ವಿ.ಚಾನೆಲ್ ಕೆಮರಾಗಳು ಮತ್ತು ಪತ್ರಿಕಾ ಛಾಯಾಗ್ರಾಹಕರು ಚುರುಕಾದರು.  

ಹಾಗೇ ಕ್ಯಾಮರಾ ಕಣ್ಣಲ್ಲಿ ವೇದಿಕೆ ಹಿಂಭಾಗದಲ್ಲಿದ್ದ ಫ್ಲೆಕ್ಸ್‌ ನೋಡುತ್ತಿದ್ದ ಅನಂತ್‌ ಅವರನ್ನು ಪತ್ರಿಕಾ ಕೆಮರಾಗಳು ಸೆರೆ ಹಿಡಿದದ್ದೇ ಹಿಡಿದ್ದದ್ದು. ವಿಡಿಯೋ ಕೆಮರಾಗಳೂ ಕಡಿಮೆಯೇನಲ್ಲ….

ಇಷ್ಟೆಲ್ಲಾ ವೀಕ್ಷಿಸಿದ ಮಾಧ್ಯಮ ಸ್ನೇಹಿತರು ಅನಂತ್‌ಕುಮಾರ ಅವರ ಪಾಠ ಕೇಳಿ ಅರ್ಥ ಮಾಡಿಕೊಂಡಿದ್ದು ಏನು ಅಂತೀರಾ ? ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವುದು ಕೂಡಾ ಒಂದು ಕಲೆ.  ಅದನ್ನು ಹೀಗೂ ಮಾಡಬಹುದು ಎಂದು…! ವಾಹ್‌ ! ಅನಂತ್‌ಕುಮಾರ್‍ ನಿಮ್ಮ ಚಾಣಕ್ಷತನಕ್ಕೆ ಹ್ಯಾಟ್ಸ್‌ ಆಫ್ !

ಹತ್ತಿ ಕಂಡ್ರೆ ಆಕೆ ಮಾರು ದೂರ ಓಡೋಗ್ತಿದ್ಳು…

coton-g2

 ಹಲೋ.. ಏನಪ್ಪಾcoton2 ಇದು ಅಂತನಾ ? ಹತ್ತಿ ಕಂಡ್ರೆ ಆಕೆ ಮಾರು ದೂರ ಓಡ್ತಾ ದ್ದಿದ್ದು ಯಾಕೆ ಅಂತ ಕುತೂಹಲಾನಾ? ಹೌದು ಇದು ಇಪ್ಪತ್ತೆಂಟರ ಯುವಕನೊಬ್ಬನ ಬಾಲ್ಯದ ನೆನಪುಗಳು…

                                *****

ಆತನದು ಮುದ್ದು ಮುಖವಾದ್ರೂ  ತುಂಟುತನದ ಕಳೆ ಅಲ್ಲಿತ್ತು. ಆತನಿಗೋ ಇನ್ನೂ ಆರು ವರ್ಷ ತುಂಬಿಲ್ಲ. ಹುಡುಗಿಯರನ್ನು ಕಂಡ್ರ ಸಾಕು ತುಂಟು ನಗು ಚೆಲ್ಲಿ ಹಾಗೇ ಬಲೆಗೆ ಹಾಕಿ ಬಿಡ್ತಿದ್ದ. ಅವನಿಗೆ ಹತ್ತಿ ಕಂಡ್ರೆ ತುಂಬ ಇಷ್ಟ. ಹಾಗಾಗಿ ಆತ ತನ್ನ ನಾಸಿಕ ಬಳಿ ಹತ್ತಿ ಹಿಡಿದುಕೊಂಡು ಅದರ ಮೃದುತ್ವವನ್ನು ಅನುಭವಿಸುತ್ತಿದ್ದ. ದೀಪದ ಬತ್ತಿ ಎಂದು ಎತ್ತಿಟ್ಟ ಹತ್ತಿಯನ್ನು ಆತ ಬಿಡುತ್ತಿರಲಿಲ್ಲ.

ಅಪ್ಪ ಅಮ್ಮಂಗೆ ಆತ ಮುದ್ದಿನ ಮಗನಾಗಿದ್ದ. ಅವರೋ ಶಿಕ್ಷಕರು. ಬೆರಳಚ್ಚು ಶಾಲೆ ನಡೆಸುತ್ತಿದ್ದುದರಿಂದ ಎಲ್ಲರೂ ಅವರನ್ನು ಟೈಪ್ ಮಾಸ್ಟ್ರು, ಟೈಪ್ ಟೀಚರ್‍ ಎಂದೇ ಕರೆಯುತ್ತಿದ್ದರು.  ಅವರು ಬೆರಳಚ್ಚು ಶಾಲೆಗೆ ಮಗನನ್ನು ಕರೆದೊಯ್ಯುತ್ತಿದ್ದರು. ಹೀಗಾಗಿ ಅಲ್ಲಿ ಬರೋ ಸ್ಟೂಡೆಂಟ್‌ಗಳಿಗೆಲ್ಲಾ ಈ ಮುದ್ದು ಹುಡುಗ ಅಚ್ಚುಮೆಚ್ಚು.

ಅವರಲ್ಲಿ ಕೆಲವರು ಚಾಕಲೇಟ್‌ ಕೊಟ್ಟು ಆತನನ್ನು ಎತ್ತಿ ಮುದ್ದಾಡುತ್ತಿದ್ದರು. ಇನ್ನು ಪಕ್ಕದಲ್ಲೇ ಅಂಗಡಿ ಇಟ್ಟಿದ್ದ ರೇಡಿಯೋ ರಿಪೇರಿ ಮಾಡೋ ಅಂಕಲ್ ಅಂತೂ ಅಮೂಲ್‌ ಹಾಲಿನ ಪುಡಿ ಡಬ್ಬಾ ತಂದಿಟ್ಟಿದ್ದರು. ಅವರಿಗೊತ್ತು ಆತನಿಗೆ ಅಮೂಲ್ ಹಾಲಿನ ಪುಡಿ ಅಂದ್ರೆ ಪಂಚಪ್ರಾಣ ಅಂತ. ಕೆಲವರು ಈ ಮುದ್ದು ಪುಟಾಣಿಯ ವೀಕ್‌ನೆಸ್‌ ತಿಳ್ಕೊಂಡ್ರೆ… ಈ ಮುದ್ದು ಕಿಲಾಡಿ  ಆ ಹುಡುಗಿಗೆ ಏನ್‌ ಮಾಡ್ತಾ ಇದ್ದ ಗೊತ್ತಾ…

ಹ್ಞಾಂ..! ಅಷ್ಟೊಂದು ಕುತೂಹಲಾನಾ..? ತಡೀರಿ ಆ ಹುಡುಗಿ ಬಗ್ಗೆ ಹೇಳ್ಬೇಕಲ್ವಾ ? ಹೌದು ಆಗ ಆಕೆ ವಯಸ್ಸು ಒಂದು ಇಪ್ಪತ್ತು ಇರಬಹುದು. ಕ್ರಿಶ್ಚಿಯನ್ ಹುಡುಗಿ. ಹೆಸರು ಮೇರಿ. ತುಂಡು ಲಂಗ ಹಾಕಿಕೊಂಡು ಎರಡು ಜಡೆ ಹೆಣೆದುಕೊಂಡು ಆಕೆ ಬರೋದ್‌ ನೋಡ್‌ಬೇಕು.. ಅರೆ ಮರೆತೆ ನೋಡಿ.. ಕೈಯಲ್ಲೊಂದೆರಡು ಟೈಪ್‌ರೈಟಿಂಗ್‌ ಪುಸ್ತಕ ಹಿಡಿದು ಅದನ್ನು ಎದೆಗವಚಿಕೊಂಡು ಅಕೆ ಇನ್ನೇನು ಒಂದನೇ ಮಹಡಿಯಲ್ಲಿರೋ ಆ ಟೈಪ್ ರೈಟಿಂಗ್ ಶಾಲೆಗೆ ಮೆಟ್ಟಿಲೇರಿ ಬರುತ್ತಿದ್ದರೆ ಈ ತುಂಟ ಏನ್ ಮಾಡ್ತಿದ್ದ ಹೇಳಿ !

ದೂರದಿಂದಲೇ ಮೇರಿ ಬರೋದ್‌ ನೋಡಿದ್ರೆ ಸಾಕು. ಈ ಹುಡುಗ ಕೂಡಲೇ ಓಡ್‌ ಹೋಗ್ತಿದ್ದುದು ದೇವರ ಫೋಟೋ ಬಳಿಗೆ. ಅಲ್ಲಿರುವ ದೀಪದ ಬತ್ತಿ ಎತ್ತಿಕೊಂಡು ಕಳ್ಳ ಹೆಜ್ಜೆ ಹಾಕ್ತಿದ್ದ. ಅಮ್ಮ ಅಪ್ಪ ನೋಡಿದ್ರೆ ಮೇರಿನ ಗೋಳು ಹೊಯ್ಕೊಳ್ಳೋದು ಅಸಾಧ್ಯ ಎಂಬುದು ಗೊತ್ತು ಆತನಿಗೆ.

ಇನ್ನು ಮೇರಿನೋ… ಬೆದರಿದ ಜಿಂಕೆಯಂತೆ ಅತ್ತ ಇತ್ತ ನೋಡುತ್ತಾ ಹಾಗೇ ಮೆಟ್ಟಿಲೇರುತ್ತಾ ಬರುತ್ತಾಳೆ. ಬಾಗಿಲ ಸಂದಿಗಳನ್ನು ಪರಿಶೀಲಿಸುತ್ತಾಳೆ. ಈ ತುಂಟ ಎಲ್ಲಿದ್ದಾನೋ ಎಂಬ ಭಯದಿಂದ… ಹಾಗೇ ಟೀಚರ್‌ ಎಂದು ಕೂಗುತ್ತಲೇ ಒಳ ಕಾಲಿಡುತ್ತಾಳೆ. ಈ ಹುಡುಗ ಹತ್ತಿರ ಹೋದರೆ ಸಾಕು ಕೊಂಚ ಭಯಮಿಶ್ರಿತ ನೋಟ ಬೀರುತ್ತಾಳೆ ಆಕೆ.

ದಿನಕ್ಕೊಂದು ಬಾರಿಯಾದರೂ ಆಕೆಯನ್ನು ಕಾಡದೇ ಹೋದರೆ ಈ ತುಂಟನಿಗೂ ಸಮಾಧಾನವಿಲ್ಲ.  ಹಾಗೆ ಕಾಡಿದಾಗ ಮೇರಿ ಒಂದೋ ಟೀಚರ್‍ ಎಂದು ಕಿರಿಚುತ್ತಾ ಆತನ ಅಮ್ಮನ ಬಳಿಗೆ ಓಡಿ ಹೋಗ್ತಿದ್ದಳು. ಇಲ್ಲಾ ಪುಸ್ತಕ ಹಿಡಿದುಕೊಂಡು ಪಟಪಟ ಅಂತ ಮೆಟ್ಟಿಲಿಳಿದು ರಸ್ತೇಲಿ ಕೂಡಾ ಓಡುತ್ತಿದ್ದಳು.

ಆದರೂ ಈ ಪೋರನಿಗೆ ಕುತೂಹಲ.. ಮೇರಿ ಹತ್ತಿ ಕಂಡ್ರೆ ಯಾಕೆ ಮಾರು ದೂರ ಓಡೋಗ್ತಿದ್ದಾಳೆ ? ಅಂತ. ಆಕೆಯ ತೊಳಲಾಟ ನೋಡಲಾರದೆ ಕೊನೆಗೂ ಪೋರ ಕೇಳಿದ..

“ಮೇರಿ ಅಕ್ಕ, ನೀನ್ಯಾಕೆ ಹತ್ತಿ ಕಂಡ್ರೆ ಓಡೋಗ್ತೀಯಾ ? ಅದರಲ್ಲೇನಿದೆ ಅಂಥಾದ್ದು ! “

ಮೇರಿ ಒಂದಕ್ಷರ ಮಾತಾಡ್ತಾ ಇರಲಿಲ್ಲ. ತುಂಬ ಸಂಕೋಚದ ಆಕೆ ತಲೆ ಅಡಿಗೆ ಹಾಕಿ ಹುಸಿ ನಗು ನಕ್ಕು ಹೋಗೋದು ನೋಡ್ತಾ ನಿಲ್ಲೋದಷ್ಟೇ ಈ ಪೋರನಿಗೆ ದಕ್ಕಿದ್ದು…! ಹತ್ತಿ ಕಂಡ್ರೆ ಆಕೆ ಮಾರು ದೂರ ಓಡಿಹೋಗೋದಕ್ಕೆ ಕಾರಣ ಏನು ಎಂಬುದಕ್ಕೆ ಉತ್ತರ ಕೊನೆಗೂ ಸಿಗಲಿಲ್ಲ…!

Published in:  on November 14, 2008 at 2:20 pm Comments (1)

ಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ !

ctaಅರೆ ಇದು ನಾನು ಅಂದು ಕಂಡ ಚಿತ್ರದುರ್ಗನಾ..!

ಹೌದು ಮೊನ್ನೆ ಸೋಮವಾರ(19/01/2009) ಚಿತ್ರದುರ್ಗ ಬಸ್‌ ನಿಲ್ದಾಣದ ಬಳಿ ಬಂದಾಗ.. ನನ್ನ ಮನಸ್ಸು ಫ್ಲಾಶ್‌ ಬ್ಯಾಕ್ ಹೋಗಿತ್ತು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿ, ಅಲ್ಲೇ ಪ್ಲಸ್‌ ೨ ತನಕ ಶಿಕ್ಷಣ ಪಡೆದ ನನಗೆ ಪದವಿ ಮತ್ತು ಸ್ನಾತಕೋತ್ತರ ಡಿಪ್ಲೋಮ ಪದವಿ ಶಿಕ್ಷಣ ಕೊಟ್ಟಿದ್ದು ಕರ್ನಾಟಕ. ಗಡಿನಾಡ ಕನ್ನಡಿಗರು ಎನಿಸಿಕೊಂಡಿದ್ದಾಗಿದೆ. ಮಲೆಯಾಳ ಓದೋಕು, ಬರೆಯೋಕು ಕಲಿತಿಲ್ಲ. ಹಾಗಾಗಿ ಅಲ್ಲಿ ಕೆಲಸ ಖಾತ್ರಿ ಇಲ್ಲ. ಇನ್ನೇನು ಅನ್ನೋ ಹೊತ್ತಿಗೆ ಕರಾವಳಿಯ ನಂ.೧ ಕನ್ನಡ ದೈನಿಕ ಉದಯವಾಣಿ ನನ್ನ ಕೈ ಬೀಸಿ ಕರೆದಿತ್ತು. ಹಾಗೆ ಉದಯವಾಣಿಯಲ್ಲಿ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್‌ ಪ್ರಾರಂಭಿಸಿದ್ದೆ. ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಎಂದೋ ಚಿತ್ರದುರ್ಗಕ್ಕೆ ಹೋಗಬೇಕು ಎಂಬ ಕನಸು ಕಂಡಿದ್ದೆ. ಅಲ್ಲಿ ಇತಿಹಾಸ ಕೇಳಿದ್ದರಿಂದಲೇ ಇರಬೇಕು. ಅದು ಹೀಗೆ ನನಸಾಗತ್ತೆ ಅಂತ ಊಹಿಸಿ ಕೂಡಾ ಇರಲಿಲ್ಲ. ಅಂಥದ್ದೊಂದು ಅವಕಾಶ ನೀಡಿತ್ತು ಕರ್ನಾಟಕದ ನಂ.೧ ದಿನ ಪತ್ರಿಕೆ.

ಅದು ೨೦೦೫ರ ಜುಲೈ ೨೧ರ ಸಂಜೆ ೫.೩೦ರ ಸಮಯ. ಇನ್ನೇನು ಸೂರ್ಯ ಕಂತುವ ಆ ಹೊತ್ತು. ಬಾನು ಕೆಂಪಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಚಿತ್ರದುರ್ಗಕ್ಕೆ ಕಾಲಿರಿಸಿದ ಆ ಕ್ಷಣ. ಆದರೂ ವಿಜಯಕರ್ನಾಟಕದ ದಾಖಲೆಯಲ್ಲಿ ನಾನು ಚಿತ್ರದುರ್ಗಕ್ಕೆ ಕಾಲಿಟ್ಟ ಕ್ಷಣ ಒಂದು ದಿನ ತಡವಾಗಿ ಅಂದರೆ ೨೧ರ ಸಂಜೆ ಆಗಿತ್ತು. ಹ್ಞಾಂ… ಹೇಗಿತ್ತು ಗೊತ್ತಾ ಅಂದು ನಾನು ಕಂಡ ದೃಶ್ಯ ! ಹೀಗೆ ಕಲ್ಲು ಬಂಡೆಗಳ ಏಳುಸುತ್ತಿನ ಕೋಟೆ ಕಣ್ಸೆಳೆದರೆ.. ಬಸ್‌ ಇಳಿದಾಕ್ಷಣ ಚಿತ್ರದುರ್ಗದ ಇನ್ನೊಂದು ಮುಖ ಹೇಗೆ ಕಂಡಿತ್ತು ಗೊತ್ತಾ ?

ಹೌದು. ಕುಗ್ರಾಮವೊಂದರ ಬಸ್‌ ನಿಲ್ದಾಣ ಹೇಗಿರಬಹುದು ? ಊಹಿಸಿಕೊಂಡ್ರಾ… ಹಾಗಿತ್ತು. ನಾನು ಅಂದು ಕಂಡ ಚಿತ್ರದುರ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ! ಯಾವಾಗ ಬಿದ್ದು ಹೋಗತ್ತೋ ಎಂಬಂತಿದ್ದ ಹಳೆ ಕಟ್ಟಡ ! ಅಲ್ಲೊಂದು ಹೋಟೆಲ್‌, ಮಧ್ಯಭಾಗದ ಪ್ರವೇಶ ದ್ವಾರದಲ್ಲಿ ಎಸ್ಟಿಡಿ ಬೂತ್, ಹಣ್ಣಿನ ರಸದ ಅಂಗಡಿ, ನಂದಿನಿ ಹಾಲಿನ ಬೂತ್ ಹೀಗೆ. ಆ ಮೇಲೆ ಕರ್ನಾಟಕದ ಗ್ರಾಮೀಣ ಭಾಗದಲ್ಲಿದ್ದ ಎಲ್ಲ ಬಸ್‌ ನಿಲ್ದಾಣಗಳಂತೆ ಇಲ್ಲೂ ಎಲ್ಲೆಲ್ಲೂ ಗಲೀಜು. ಗುಟ್ಕಾ ತಿನ್ನೋರು, ಬೀಡಾ ತಿನ್ನೋರು ಎಲ್ಲರೂ ಉಗುಳೋದು ಎಲ್ಲೆಂದರಲ್ಲಿ.. ಇನ್ನು ಬಸ್‌ ನಿಲ್ದಾಣದ ಶೌಚಾಲಯದ ಗಬ್ಬೋ ಅದು ಕಿ.ಮೀ. ದೂರಕ್ಕೆ ರಾಚುತ್ತಿತ್ತು. ಆದರೆ ಚಿತ್ರದುರ್ಗ ಐತಿಹಾಸಿಕ ಕ್ಷೇತ್ರ ಎಂಬುದು ಈ ಎಲ್ಲ ಕೊರತೆಗಳನ್ನೂ ನನ್ನಿಂದ ಮರೆ ಮಾಡಿಸಿತ್ತು. ಹಾಗಾಗಿ ನನ್ನ ಗೆಳೆಯರು, ಹಿತೈಷಿಗಳು ಬಂಧುಗಳು, ಏ ! ನೀನು ನೀರಿಲ್ಲದ ಊರಿಗೆ ಹೋಗ್ತಾ ಇದ್ದೀಯಾ.. ಅಲ್ಲಿ ಜೀವನ ನಡೆಸೋದು ಕಷ್ಟ.. ಒರಟು ಜನ ಎಂದು ಎಷ್ಟೇ ಹೇಳಿದರೂ ಕೇಳದೇ ಚಿತ್ರದುರ್ಗ ಬಸ್‌ ಏರಿದ್ದೆ.

ಇಷ್ಟ ಪಟ್ಟ ಊರಿಗೆ ಕಾಲಿಟ್ಟ ಸಂಭ್ರಮ ನನ್ನಲ್ಲಿ ಮನೆ ಮಾಡಿತ್ತು. ಹಾಗೆ ವಿಜಯ ಕರ್ನಾಟಕ ಪತ್ರಿಕೆಗೆ ಉಪಸಂಪಾದಕ/ವರದಿಗಾರನಾಗಿ ಕರ್ತವ್ಯಕ್ಕೆ ಸೇರುವ ತವಕ ನನ್ನನ್ನು ಕಾಡಿತ್ತು. ಹಾಗೆ ಐತಿಹಾಸಿಕ ಚಿತ್ರದುರ್ಗವನ್ನು ಕಾಣುವ ಭಾಗ್ಯ ನನ್ನದಾಗಿತ್ತು. ಆಗ ವಿಜಯ ಕರ್ನಾಟಕದ ಕಚೇರಿ ನಗರದ ಹೃದಯಭಾಗದ ಬಿ.ಡಿ.ರಸ್ತೆಯ ರೆಡ್ಡಿ ಬಿಲ್ಡಿಂಗ್‌ ನಲ್ಲಿತ್ತು. ಎದುರಿಗೇ ಎಸ್‌ಜೆಎಂ ಡೆಂಟಲ್‌ ಕಾಲೇಜು. ಹಾಗೆ ಬಸ್‌ ನಿಲ್ದಾಣದಿಂದ ಪತ್ರಿಕೆಯ ಆಗಿನ ಸ್ಥಾನಿಕ ಸಂಪಾದಕರಿಗೆ ದೂರವಾಣಿ ಕರೆ ಮಾಡಿದೆ. ಅವರು ಹೇಳಿದಂತೆ ರಿಕ್ಷಾವೊಂದನ್ನು ಏರಿ ಪತ್ರಿಕೆ ಕಚೇರಿಗೆ ಹೋಗಿದ್ದೆ. ಅಲ್ಲಿಗೆ ಬಂದರೆ ಆ ಕಚೇರಿ ಕೇವಲ ವರದಿಗಾರಿಕೆ, ಜಾಹೀರಾತು ಮತ್ತು ಆಯ ವ್ಯಯಕ್ಕೆ ಸಂಬಂಧಿಸಿದ್ದಾಗಿತ್ತು. ಇನ್ನು ಸಂಪಾದಕೀಯ ಮತ್ತು ಪ್ರಿಂಟಿಂಗ್‌ ಪ್ರೆಸ್‌ ಇದ್ದಿದ್ದು ಹತ್ತು ಹನ್ನೆರಡು ಕಿ.ಮೀ. ದೂರದ ಇಂಗಳದಾಳು ಎಂಬಲ್ಲಿ. ವಿಆರ್‍ಎಲ್‌ ಚೆಕ್‌ ಪಾಯಿಂಟ್‌ ಜೊತೆಗಿತ್ತು ಅದು. ಬೆಂಗಳೂರು ದಾವಣಗರೆರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದರೂ ಎಲ್ಲೋ ಮರುಭೂಮಿಯಲ್ಲಿದ್ದಂತೆ ಬಾಸವಾಗತ್ತಿತ್ತು. ಸುತ್ತಲೂ ಗುಡ್ಡ… ಎದುರು ಭಾಗದಲ್ಲಿ ರಿಲಯನ್ಸ್ ಪೆಟ್ರೋಲ್ ಬಂಕ್‌. ಹೀಗೆ ಪ್ರಾರಂಭವಾದ ಚಿತ್ರದುರ್ಗದ ಜೀವನ ಅಲ್ಲಿನ ಒಂದೊಂದೇ ವಿಶೇಷಗಳನ್ನು ನನ್ನೆದುರು ಅನಾವರಣಗೊಳಿಸತ್ತಾ ಹೋಯಿತು.

ಯಾರೇನೇ ಹೇಳಲಿ ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದು ಕಲ್ಲಿನ ಕೋಟೆ, ಒನಕೆ ಓಬವ್ವ. ಇಂತಹ ಇತಿಹಾಸ ಹೊಂದಿರುವ ಪ್ರದೇಶದ ಕುರಿತು ಮೈನವಿರೇಳಿಸುವ ಇತಿಹಾಸ ಇಲ್ಲದಿದ್ದೀತೇ? ಹಾಗೆ ತಕ್ಷಣ ನೆನಪಾದುದು ತರಾಸು ಅವರ ದುರ್ಗಾಸ್ತಮಾನ ಕಾದಂಬರಿ. ಆದರೆ ಅದನ್ನು ಓದೋಕೆ ಆಗಿರಲಿಲ್ಲ. ಅದನ್ನು ಓದುವ ಅವಕಾಶ ಲಭಿಸಿದ್ದು ೨೦೦೫ರ ನವರಾತ್ರಿ ಸಮಯದಲ್ಲಿ. ಹೌದು ಅಂದು ಆಯುಧ ಪೂಜೆ ನಿಮಿತ್ತ ಕಚೇರಿಗೆ ರಜಾ ಇತ್ತು. ಹಾಗೆ ಅಂದು ಸ್ನೇಹಿತರೊಡಗೂಡಿ ಚಿತ್ರದುರ್ಗದ ಬೆಟ್ಟ ಏರಿದ್ದೆ.

ಹಾಗೆ ಬೆಳಗ್ಗೆ ೯ ಗಂಟೆಗೆ ಸ್ನೇಹಿತರ ಜೊತೆ ಬಿ.ಡಿ.ರೋಡಲ್ಲಿ ಹೆಜ್ಜೆ ಹಾಕುತ್ತಾ ಗಾಂಧಿ ಸರ್ಕಲ್ ಬಳಿ ಹೋಗಿ ಅಲ್ಲಿಂದ ಕೋಟೆ ಬಾಗಕ್ಕೆ ತಿರುಗಿದೆ. ಹೌದು ಅಲ್ಲಿ ಆನೆ ಬಾಗಿಲಿದೆ. ಮುಂದೆ ಸಾಗಿದರೆ ಅಲ್ಲಿ ಪಾಳೆಯಗಾರರ ಮನೆದೇವತೆ ಉಚ್ಚಂಗಮ್ಮನ ದೇವಾಲಯ.. ಹಾಗೆ ಮುಂದೆ ಹೋದರೆ ಕೋಟೆ ಹೆಬ್ಬಾಗಿಲು ಕಾಣಸಿಗುತ್ತದೆ. ಇನ್ನೊಂದು ಕಡೆಯಿಂದ ಹೋದರೆ ಅಲ್ಲೂ ಬಾಗಿಲುಗಳಿವೆ. ಹೀಗೆ ಏಳು ಸುತ್ತಿನಿಂದ ಕೂಡಿರುವ ಈ ಕೋಟೆಗೆ ಏಳು ಪ್ರಮುಖ ಬಾಗಿಲುಗಳಿವೆ. ರಂಗಯ್ಯನ ಬಾಗಿಲು, ಸಿದ್ದಯ್ಯನ ಬಾಗಿಲು, ಉಚ್ಚಂಗಿ ಬಾಗಿಲು, ಜೋಡು ಬತೇರಿ ಬಾಗಿಲು, ಹನುಮನ ಬಾಗಿಲು, ಗಾರೆ ಬಾಗಿಲು, ಕಾಮನಬಾಗಿಲು ಹೀಗೆ ಪ್ರತಿಯೊಂದನ್ನು ಕೂಡಾ ನೋಡಿದೆ. ಎಲ್ಲ ಸ್ಥಳಗಳನ್ನೂ ಸ್ಮೃತಿ ಪಟಲಕ್ಕೆ ಸೇರಿಸುತ್ತಾ ಹೋದೆ. ಮನೆಗೆ ಬಂದು ತರಾಸು ಅವರ ದುರ್ಗಾಸ್ತಮಾನ ಓದಲು ಕುಳಿತೆ. ನಿಜವಾಗಿಯೂ ಚಿತ್ರದುರ್ಗ ಪ್ರತಿಯೊಂದು ಕಲ್ಲು ಕೂಡಾ ಒಂದೊಂದು ಕತೆ ಹೇಳುತ್ತಿದೆಯೇನೋ ಎಂದು ಭಾಸವಾಗಿತ್ತು. ರಿಯಲಿ ಹ್ಯಾಟ್ಸ್‌ ಆಫ್‌ ಹೇಳಲೇ ಬೇಕು ತರಾಸು ಅವರಿಗೆ…!

ಹ್ಞಾಂ ಇಷ್ಟೆಲ್ಲಾ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಿರುವುದು ಯಾಕೆ ಅಂತ್ಲಾ ? ಏನಿಲ್ಲಾ ೭೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಚಿತ್ರದುರ್ಗದಲ್ಲಲ್ವೇ ನಡೀತಿರೋದು ! ಹೋಗೋಕೆ ಮುಂಚೆ ದಯವಿಟ್ಟು ದುರ್ಗಾಸ್ತಮಾನ ಓದ್ತೀರಲ್ವಾ ?